ಭಾರತವನ್ನು ಇಬ್ಭಾಗ ಮಾಡುವ ಕೆಲಸವಿದು; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಡಿಸೆಂಬರ್ 08: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ಭಾರತ ಬಂದ್ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ರೈತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
Recommended Video
ಚಿಕ್ಕಮಗಳೂರಿನಲ್ಲಿಯೂ ಪ್ರತಿಭಟನೆ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐಎಂಎಲ್, ಕನ್ನಡಪರ ಸಂಘಟನೆ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ 16 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಬಂದ್ಗೆ ಮೈಸೂರಲ್ಲಿ ನೀರಸ ಪ್ರತಿಕ್ರಿಯೆ; ಕೆಲವೆಡೆ ಬಲವಂತದ ಬಂದ್
ಭಾರತ್ ಬಂದ್ ಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, "ದೇಶದ ಹೊರಗೆ ಕುಳಿತ ಉಗ್ರ ಸಂಘಟನೆಗಳು ಭಾರತವನ್ನು ಇಬ್ಭಾಗ ಮಾಡಲು ರೈತರನ್ನು ಎತ್ತಿಗಟ್ಟುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿವೆ. ಖಲಿಸ್ತಾನ್ ಚಳವಳಿ ಈಗಲೂ ನಡೆಯುತ್ತಿದೆ ಎಂದು ರೈತರನ್ನು ಪ್ರೇರೇಪಿಸಲಾಗುತ್ತಿದೆ. ಸರ್ಕಾರದ ವಿರುದ್ಧ ರೈತರನ್ನು ಎತ್ತಿಗಟ್ಟುತ್ತಿವೆ" ಎಂದು ದೂರಿದರು.
ಇವತ್ತಿನ ಬಂದ್ ಕೇವಲ ರೈತರು ನಡೆಸುತ್ತಿರುವ ಬಂದ್ ಅಲ್ಲ. ರೈತರನ್ನ ದಿಕ್ಕು ತಪ್ಪಿಸುವಂಥ ರಾಜಕೀಯ ಪಕ್ಷಗಳ ಬಂದ್. ಮೋದಿ ಸರ್ಕಾರದ ವಿರೋಧದ ಬಂದ್ ಇದು. ಶಾಂತಿಯುತ ಹೋರಾಟಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡುತ್ತದೆ ಎಂದರು.
ಶಾಯಿನ್ ಭಾಗ್ ನಲ್ಲಿ ಭಾಗವಹಿಸಿದ ತುಕುಡೇ ಗ್ಯಾಂಗ್ ಈ ಹೋರಾಟದಲ್ಲಿದ್ದಾರೆ. ಸಿಎಎ, ಖಲಿಸ್ತಾನ್ ಹೋರಾಟದಲ್ಲಿದ್ದವರ ಮಾತು ಕೇಳಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ದೇಶದ ಹೊರಗಿರುವ ಉಗ್ರ ಸಂಘಟನೆಗಳು ಭಾರತದ ಸೈನಿಕರೇ ದೇಶದ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದಿಸುತ್ತಿವೆ. ಈ ರೀತಿಯ ವಾಯ್ಸ್ ಮೆಸೇಜ್ ಗಳು ಸಂಸತ್ ಸದಸ್ಯರಿಗೆ ತಲುಪುತ್ತಿವೆ ಎಂದು ಹೇಳಿದರು.
ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಮೋದಿ ವಿರೋಧಿಸಲು ಉಗ್ರ ಸಂಘಟನೆಗಳ ಜೊತೆ ಕೈ ಜೋಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.