ಪರೀಕ್ಷೆ ಇಲ್ಲದ ವರ್ಷ ಎಂದು ಘೋಷಿಸಿ: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಅಕ್ಟೋಬರ್ 9: ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶ ಮತ್ಯು ರಾಜ್ಯದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಸಾವುಗಳು ಸಂಭವಿಸಿದೆ. ಹೀಗಾಗಿ ಈ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷ ಎಂದು ಘೋಷಣೆ ಮಾಡಬೇಕು. ಆನ್ ಲೈನ್ ಮೂಲಕ ಶಾಲೆಯನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದು ಬೇಡ ಎಂದು ಸಂಸದೆ ಶೋಬಾ ಕರಂದ್ಲಾಜೆ ಸಲಹೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಅವರು, "ಕೊರೊನಾ ವಾರಿಯರ್ಸ್ ಗಳ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭ ಮಾಡುವುದು ಹಾಗೂ ಶಿಕ್ಷಕರು ಶಾಲೆಗೆ ಹೋಗುವ ಬಗ್ಗೆ ಚರ್ಚೆಯಾಗುತ್ತಿದೆ. ಈ ವರ್ಷ ಶಾಲೆ ಆರಂಭ ಮಾಡದೇ ಇರುವುದೇ ಒಳ್ಳೆಯದು. ಫೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಮಸ್ಯೆಗೆ ದೂಡುವುದಿಲ್ಲ. ಶಿಕ್ಷಕರ ಜೀವ ಉಳಿಸಲು ಪ್ರಯತ್ನಪಡಬೇಕು. ಪ್ರಧಾನಿ ಹೇಳಿದಂತೆ ಮೊದಲು ಜೀವ ಉಳಿಸಿ ನಂತರ ಜೀವನ ಮಾಡೋಣ. ಡಿಸೆಂಬರ್ ವರೆಗೂ ಜೀವ ಉಳಿಸುವ ಕೆಲಸ ಆಗಲಿ" ಎಂದರು.
ಕೊರೊನಾದಿಂದ ಶಿಕ್ಷಕರ ಸಾವು; ಶಾಲೆ ಬೇಡವೇ ಬೇಡ ಎಂದ ಶಾಸಕ
ಇದೇ ಸಂದರ್ಭದಲ್ಲಿ, ಕೃಷಿ ಸಂಬಂಧಿತ ಮಸೂದೆಗಳ ಕುರಿತು ಮಾತನಾಡಿ, ಕೇಂದ್ರ ಸರ್ಕಾರವು ಕೃಷಿ ಸಂಬಂಧಿತ ಮಸೂದೆಗಳನ್ನು ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿದೆ. ಆದರೆ ವಿಪಕ್ಷ ಹಾಗೂ ಬೇರೆ ಬೇರೆ ಸಂಘಟನೆಗಳು ತಪ್ಪು ಕಲ್ಪನೆಯನ್ನು ಜನರಿಗೆ ನೀಡುತ್ತಿವೆ ಎಂದರು.
"ಈ ಮಸೂದೆಗಳನ್ನು ಮನಮೋಹನ್ ಸಿಂಗ್ ಅವಧಿಯಲ್ಲೇ ತೀರ್ಮಾನ ಮಾಡಲಾಗಿತ್ತು. ಈಗ ರೈತರ ಹಿತದೃಷ್ಟಿಯಿಂದ, ರಾಷ್ಟ್ರದಲ್ಲಿ ಶೇ.80ರಷ್ಟು ಸಣ್ಣ, ಅತಿಸಣ್ಣ ರೈತರಿದ್ದು ಅವರ ರಕ್ಷಣೆ ಆಗಬೇಕು ಎಂಬ ಕಾಳಜಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ರೈತರು ಈಗಾಗಲೇ ಹಳ್ಳಿಗಳನ್ನು ಬಿಟ್ಟು ನಗರಕ್ಕೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇಂತಹ ಉದಾಹರಣೆಗಳು ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಕಂಡುಬರುತ್ತಿದೆ. ಹೀಗಾಗಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂಬ ದೃಷ್ಟಿಯಿಂದ ಈ ಮಸೂದೆಗಳನ್ನು ಜಾರಿಗೆ ತರಲಾಗಿದೆ" ಎಂದರು
ಹತ್ರಾಸ್ ಪ್ರಕರಣದ ಹಿಂದೆ ಪಿಎಫ್ ಐ, ಎಸ್ಡಿಪಿಐ ಕೈವಾಡ: ಈ ಪ್ರಕರಣದಲ್ಲಿ ಪಿಎಫ್ ಐ, ಎಸ್ಡಿಪಿಐ ಕೈವಾಡ ಇದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸಮಾಜದಲ್ಲಿ ಪ್ರಕ್ಷುಬ್ದತೆ ಉಂಟು ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದನ್ನು ಎರಡು ಸಂಸ್ಥೆಗಳನ್ನು ನಿಷೇಧ ಮಾಡಬೇಕು ಹಾಗೂ ಇಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಲವಾದ ಕಾನೂನು ರೂಪುಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.