ಮಲೆನಾಡು ಭಾಗದಲ್ಲಿ ಆನ್ಲೈನ್ ಕ್ಲಾಸ್ ಬೇಡ, ಶಾಲೆ ತೆರೆಯುವಂತೆ ಒತ್ತಾಯ
ಚಿಕ್ಕಮಗಳೂರು, ಜೂನ್ 24: "ಮಲೆನಾಡು ಭಾಗದಲ್ಲಿ ಆನ್ಲೈನ್ ಕ್ಲಾಸ್ ನಡೆಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆನ್ಲೈನ್ ಕ್ಲಾಸ್ ರದ್ದುಮಾಡಿ ಶಾಲೆಗಳನ್ನು ತೆರೆಯಲಿ,'' ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ, "ಮೊಬೈಲ್ ಇಲ್ಲದೆ ಕೂಲಿ ಕಾರ್ಮಿಕರ, ಬಡವರ್ಗದ ಶೇ.50ರಷ್ಟು ಮಕ್ಕಳು ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ. ಅವರಿಗೆ ಆಟ- ಪಾಠ ಇಲ್ಲವಾಗಿದೆ. ಬೇರೆ ದಾರಿ ಏನು ಎಂಬುದೇ ಪೋಷಕರಿಗೆ ತಿಳಿಯದೆ ಕಂಗಾಲಾಗಿದ್ದಾರೆ,'' ಎಂದು ಹೇಳಿದರು.
ವಿಶೇಷ ವರದಿ: ವಿದ್ಯಾರ್ಥಿಗಳಿಗೆ ಆನ್ಲೈನ್ ನರಕ ದರ್ಶನ!
"ಸ್ಥಿತಿವಂತರು ಮಾತ್ರವೇ ಮಕ್ಕಳಿಗೆ ಮೊಬೈಲ್ ತೆಗೆದುಕೊಡಬಹುದು. ಆನ್ಲೈನ್ ತರಗತಿಗಳಿಗೆ ಮಲೆನಾಡು ಭಾಗದಲ್ಲಿ ನೆಟ್ವರ್ಕ್ ಸಿಗದೆ ಮರದ ಮೇಲೆ ಹತ್ತಿ ಕುಳಿತುಕೊಳ್ಳುವುದು, ಗುಡ್ಡಕ್ಕೆ ಹೋಗುವುದು, ಮಳೆಯಲ್ಲಿ ಪೋಷಕರು ಛತ್ರಿ ಹಿಡಿಯುವುದು, ಮಗ ಓದೋದು ಹೀಗೆಲ್ಲಾ ಕಷ್ಟಪಟ್ಟು ನರಕಯಾತನೆ ಅನುಭವಿಸುತ್ತಿದ್ದಾರೆ. ಬಡವರ್ಗದವರಿಗೆ ಶಿಕ್ಷಣ ಎಲ್ಲಿ ದೂರವಾಗುತ್ತದೋ ಎಂಬ ಆತಂಕ ಎದುರಾಗಿದೆ,'' ಎಂದರು.
Recommended Video
"ಕೊರೊನಾ ಸೋಂಕಿನಿಂದ ಮಲೆನಾಡಿಗೆ ಭಾರೀ ಆಪತ್ತೇನೂ ಬಂದಿಲ್ಲ. ಪೋಷಕರು ಆತಂಕದಿಂದ ಹೊರಬರಬೇಕು. ಸರ್ಕಾರ ಕೂಡಲೇ ಶಾಲೆಯನ್ನು ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸುವುದಾಗಿ,'' ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.