ಚಿಕ್ಕಮಗಳೂರು: ವಾಡಿಕೆಗಿಂತ ಜಾಸ್ತಿ ಮಳೆ, ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟ
ಚಿಕ್ಕಮಗಳೂರು, ಆಗಸ್ಟ್, 10: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿವೃಷ್ಟಿ ಉಂಟಾದ ಕಾರಣ ಇಲ್ಲಿನ ರೈತರು ಜೂನ್ನಿಂದ ಆಗಸ್ಟ್ವರೆಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದಾರೆ. ಹಾಗೂ ಮಳೆರಾಯ ಮೂವರನ್ನು ಬಲಿ ತೆಗೆದುಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸರಣಿ ಅನಾಹುತಗಳು ಆಗುತ್ತಿವೆ. ಮತ್ತೊಂದಡೆ ವಾಡಿಕೆಗಿಂತ ಶೇಕಡ 50ಕ್ಕಿಂತ ಹೆಚ್ಚು ಮಳೆ ಆಗಿದ್ದು ಜನರು ತತ್ತರಿಸಿ ಹೋಗುವಂತೆ ಮಾಡಿದೆ. ಕಳಸ ತಾಲೂಕು ಹೊರನಾಡಿನಲ್ಲಿ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಮೂಲದ 18 ವರ್ಷದ ಪ್ರಿಯಾಂಕ ಜಮೀನಿನಲ್ಲಿ ಕೆಲಸ ಮಾಡುವಾಗ ಮರಬಿದ್ದು ಸಾವನ್ನಪ್ಪಿದ್ದರೆ, ಹೊಸಪೇಟೆಯ 5 ವರ್ಷದ ಸುಪ್ರಿತಾ ಶಾಲೆಯಿಂದ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ. ಎನ್ಆರ್ ಪುರದ ಸಾತ್ಕೋಳ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ಕೊಚ್ಚಿ ಹೋದ ಪರಿಣಾಮ ಚಾಲಕ 51 ವರ್ಷದ ಪ್ರಸನ್ನ ಎಂಬುವವರು ಮೃತ ಪಟ್ಟಿದ್ದರು. ಹೀಗೆ ಮಳೆರಾಯ ಮೂವರನ್ನು ಬಲಿ ಪಡೆದಿದ್ದಾನೆ. ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಬ್ಬರದ ಮಳೆಯಿಂದ ಆದ ನಷ್ಟ:
ಅಬ್ಬರದ ಮಳೆಗೆ ಆರು ಜಾನುವಾರುಗಳು ಅಸುನೀಗಿದ್ದು, 1.80 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. 595 ಮನೆಗಳಿಗೆ ಹಾನಿಯಾಗಿದ್ದು, 164 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. 1,494 ವಿದ್ಯುತ್ ಕಂಬಗಳು ಧರೆಗುರುಳಿದ್ದು, ತೋಟಗಾರಿಕೆ ಮತ್ತು ಕೃಷಿ ಜಮೀನು ಸೇರಿದಂತೆ 3,219.2 ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಒಟ್ಟು 1,615 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ 129.24 ಕೋಟಿ ರೂಪಾಯಿ ನಷ್ಟ ಆಗಿದೆ. 595 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿ 21.85 ಕೋಟಿ ನಷ್ಟ ಉಂಟಾಗಿದ್ದರೆ, 195 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿ 3.80 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಶಾಲೆಗಳಂತೆ 100 ಶಾಲೆಗಳ ದುರಸ್ಥಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಜುಲೈ ಎರಡನೇ ವಾರ ಮತ್ತು ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿದೆ. ಹಾಗೂ 8 ದಿನಗಳಿಂದ ಚಿಕ್ಕಮಗಳೂರು ಮತ್ತು ಕಡೂರು ತಾಲೂಕಿನಲ್ಲಿಯೂ ಹೆಚ್ಚು ಮಳೆಯಾಗಿದೆ. ಇದೇ ರೀತಿ ಮಳೆ ಅಬ್ಬರ ಮುಂದುವರೆದರೆ ಜನಜೀವನ ಸಂಪೂರ್ಣ ದುಸ್ತರವಾಗಲಿದೆ.
Recommended Video