ಹಸಿವಿನಿಂದ ಕಂಗಾಲಾದ ಮಂಗಗಳು; ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕಲಕುವ ದೃಶ್ಯ
ಚಿಕ್ಕಮಗಳೂರು, ಆಗಸ್ಟ್ 24: ಈ ಬಾರಿ ಸುರಿದ ಮಳೆ, ಪ್ರವಾಹ ಚಿಕ್ಕಮಗಳೂರನ್ನು ತತ್ತರಿಸುವಂತೆ ಮಾಡಿದೆ. ಧೋ ಎಂದು ಸುರಿಯುವ ಮಳೆ, ಗುಡ್ಡ ಕುಸಿತ, ಭೂ ಕುಸಿತ ಜನರ ನಿದ್ದೆಗೆಡಿಸಿದ್ದವು. ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದರು ಹಲವರು. ಕೆಲ ರಸ್ತೆಗಳು ಸಂಪರ್ಕವನ್ನೇ ಕಳೆದುಕೊಂಡವು.
ಮೈಸೂರಿನಲ್ಲಿ ಹೆಚ್ಚಿದೆ ವಾನರನ ಆರ್ಭಟ; ಪಾಲಿಕೆಗೆ ದೂರುಗಳ ಮಹಾಪೂರ
ಚಾರ್ಮಾಡಿ ಘಾಟ್ ರಸ್ತೆ ಸ್ಥಿತಿಯನ್ನಂತೂ ಹೇಳುವುದೇ ಬೇಡ. ಹತ್ತನ್ನೆರಡು ಕಡೆ ಗುಡ್ಡ ಕುಸಿದು ಕಳೆದ ಹತ್ತು ದಿನಗಳಿಂದಲೂ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಆದರೆ ಈ ರಸ್ತೆಯಲ್ಲೇ ತಮ್ಮ ಆಹಾರ, ಬದುಕು ಕಂಡುಕೊಂಡಿದ್ದ ಮಂಗಗಳ ಸ್ಥಿತಿ ಮಾತ್ರ ಕರುಣಾಜನಕವಾಗಿದೆ. ರಸ್ತೆಯಲ್ಲಿ ಜನ ಸಂಚಾರವಿಲ್ಲದಿರುವುದರಿಂದ ಆಹಾರವೂ ಸಿಗದೇ ಮಂಗಗಳು ನಿತ್ರಾಣಗೊಳ್ಳುತ್ತಿವೆ.
ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ
ರಸ್ತೆ ಬಂದ್ ಹಿನ್ನೆಲೆಯಲ್ಲಿ ಮಂಗಗಳಿಗೆ ಆಹಾರ ಕೊರತೆ ಉಂಟಾಗಿದೆ. ಪ್ರತಿದಿನ ತಮ್ಮ ಮರಿಗಳೊಂದಿಗೆ ರಸ್ತೆಯಲ್ಲಿ ಆಹಾರಕ್ಕಾಗಿ ಮಂಗಗಳು ಓಡಾಡುತ್ತಿದ್ದ ದೃಶ್ಯ ಇಲ್ಲಿ ಮಾಮೂಲಾಗಿತ್ತು. ಇಲ್ಲಿ ಓಡಾಡುವವರೂ ಏನಾದರೂ ತಿನಿಸುಗಳನ್ನು ಮಂಗಗಳಿಗೆ ನೀಡುತ್ತಿದ್ದರು. ಆದರೆ ಈಗ ಯಾರೂ ಈ ರಸ್ತೆಯಲ್ಲಿ ಜನರ ಓಡಾಟ ಇಲ್ಲವಾದ್ದರಿಂದ ಮಂಗಗಳಿಗೂ ಆಹಾರ ಸಿಗುತ್ತಿಲ್ಲ.
ಆಹಾರವಿಲ್ಲದೇ ಹಸಿವಿನಿಂದ ಕಂಗಾಲಾಗಿರುವ ಮಂಗಗಳು ರಸ್ತೆಯಲ್ಲಿ ತಿಂಡಿಗೆ ಕಾದು ಕುಳಿತಿರುವ ದೃಶ್ಯ ಮನಹಿಂಡುವಂತಿದೆ. ರಸ್ತೆ ಬದಿಯಲ್ಲಿ, ಮರಗಳ ಮೇಲೆ ಆಹಾರವಿಲ್ಲದೇ ಮಂಗಗಳು ನಿತ್ರಾಣಗೊಂಡು ಮಲಗಿವೆ.