ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ
ಚಿಕ್ಕಮಗಳೂರು, ಡಿಸೆಂಬರ್ 9: ರಸ್ತೆ ಬದಿಯಲ್ಲೋ ರೈಲು ನಿಲ್ದಾಣದಲ್ಲಿಯೋ ಅಥವಾ ಇನ್ಯಾವುದೋ ಜನನಿಬಿಡ ಪ್ರದೇಶದಲ್ಲಿ ಭಿಕ್ಷೆ ಎತ್ತುವ ಮಂಗಳಮುಖಿಯರನ್ನು ನೋಡಿರುವ ಸಾಧ್ಯತೆ ಇದೆ. ಇಂಥವರನ್ನು ಮನೆಯಿಂದ ಹೊರಗೆ ಹಾಕಿದ ಮೇಲೆ ಬದುಕಿನ ಅನಿವಾರ್ಯಕ್ಕಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಮಂಗಳಮುಖಿಯರ ಬಗ್ಗೆಯೂ ಕೇಳಿರುವ ಸಾಧ್ಯತೆ ಇದೆ.
ಆದರೆ, ಈಗ ನೀಡುತ್ತಿರುವ ಉದಾಹರಣೆ ವಿಭಿನ್ನವಾಗಿದೆ. ಈ ಮಂಗಳಮುಖಿಯರು ಸ್ವಂತ ಕಾಯಕ ಮಾಡುವ ಮೂಲಕ ಸಮಾಜದ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಅಷ್ಟೇ ಅಲ್ಲ, ತಾವು ಭಿನ್ನ ಹಾದಿ ತುಳಿಯುವ ಮೂಲಕ ಅದೆಷ್ಟೋ ಮಂಗಳಮುಖಿಯರಿಗೆ ಮಾದರಿಯಾಗಿ ಇದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ಹುದ್ದೆ ಪಡೆದ ತೃತೀಯ ಲಿಂಗಿ
ಸಮಾಜದಲ್ಲಿ ತೆಗಳಿಕೆಗೆಂದೇ ಹುಟ್ಟಿದ್ದಾರೆ ಎನಿಸಿಕೊಳ್ಳುವ ತೃತೀಯ ಲಿಂಗಿಗಳು ಅಪ್ಪಟ ಅಸ್ಪೃಶ್ಯರಂತೆ ಕಾಣುತ್ತಾರೆ. ಜನರು ಸದಾ ಆಡಿಕೊಳ್ಳುವ ಈ ವರ್ಗದಲ್ಲಿನ ಜನರು ಇಂದು ತಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಾಧನೆಯ ಹಾದಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಆ ಭಿನ್ನ ಹಾದಿ ಏನು ಎಂಬುದನ್ನು ತಿಳಿಸುವ ವರದಿ ಇದು.
ಅಪ್ಪಟ ಕೃಷಿ ಕಾಯಕದಲ್ಲಿ ಮಂಗಳಮುಖಿಯರು
ಚಿಕ್ಕಮಗಳೂರು ಜಿಲ್ಲೆ ಹೇಳಿ ಕೇಳಿ ಮಲೆನಾಡು. ಇಲ್ಲಿ ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತದೆ. ಭೂ ರಮೆಯ ತೋಟವೆಂದೇ ಪ್ರಸಿದ್ಧ ಆಗಿರುವ ಇಲ್ಲಿನ ಪ್ರದೇಶ ಮಂಗಳಮುಖಿಯರನ್ನೂ ಸಹ ಕೃಷಿ ಮಾಡುವಂತೆ ಮಾಡಿದೆ. ಸಾಮಾನ್ಯವಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಇಂಥವರು ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಸಾಮೂಹಿಕವಾಗಿ ಒಕ್ಕಲುತನದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಸು ಸಾಕುವ ಮೂಲಕ ಹೈನುಗಾರಿಕೆಗೂ ಸೈ
ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಮಂಗಳಮುಖಿಯರು ರೈತ ಕುಟುಂಬದಂತೆ ಬದುಕಿದ್ದಾರೆ. ಮೆಕ್ಕೆಜೋಳ, ಟೊಮೆಟೊ, ಆಲೂಗೆಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆವರು ಸುರಿಸಿ ಬೆಳೆಯುತ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಹಸು ಸಾಕುವ ಮೂಲಕ ಹೈನುಗಾರಿಕೆಗೂ ಸೈ ಎನಿಸಿಕೊಂಡಿದ್ದಾರೆ.
ಉಡುಪಿ: ತೃತೀಯಲಿಂಗಿಗಳ ಸ್ವಾವಲಂಭಿ ಬದುಕಿಗೆ 'ಆಸರೆ'
ಕೆಲ ಕಾಲ ರೈತರೊಬ್ಬರ ಮನೆಯಲ್ಲಿ ದುಡಿಮೆ
ಕೃಷಿಯ ಬಗ್ಗೆ ಏನೇನೂ ಅರಿವೇ ಇಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಸಮಸ್ಯೆ ಎದುರಿಸಿದರು. ಇದೇ ಹುಲಿ ತಿಮ್ಮಾಪುರ ಗ್ರಾಮದ ರೈತರೊಬ್ಬರ ಮನೆಯಲ್ಲಿ ಕೂಲಿ ಆಳುಗಳಂತೆ ದುಡಿದು, ಇಂದು ಸ್ವಂತವಾಗಿ ಕೃಷಿ ಮಾಡುವಂತಾಗಿದ್ದಾರೆ. ಆರು ಜನರು ಈ ಕಾಯಕದಲ್ಲಿ ತೊಡಗಿ, ಸ್ವಾಭಿಮಾನದಿಂದ ಬದುಕುತ್ತಾ ಆರ್ಥಿಕವಾಗಿಯೂ ಸದೃಢರಾಗಿದ್ದಾರೆ.
ಕುರಿ-ಹಸು ಮೇಯಿಸುತ್ತಾ ಕಾಣಿಸಿಕೊಳ್ಳುತ್ತಾರೆ
ಇದೀಗ ಇತರೆ ಮಂಗಳಮುಖಿಯರನ್ನೂ ನಮ್ಮೊಂದಿಗೆ ಕೈ ಜೋಡಿಸಿ ಎಂದು ಆಹ್ವಾನಿಸಿ, ಸಮಾಜದ ಮುಖ್ಯ ವಾಹಿನಿಗೆ ಬರಲು ಮನವಿ ಮಾಡಿದ್ದಾರೆ. ಜೊತೆಗೆ ಇವರ ಕಾರ್ಯಕ್ಕೆ ಸ್ಥಳೀಯರು ಶಹಭಾಷ್ ಎನ್ನುತ್ತಿದ್ದಾರೆ. ಕೃಷಿ ಕುಟುಂಬದಿಂದ ಬಂದು, ಗ್ರಾಮಗಳನ್ನು ತೊರೆದು ನಗರಕ್ಕೆ ವಲಸೆ ಹೋಗುವ ಯುವ ಸಮೂಹವನ್ನು ನಾಚಿಸುವಂತೆ ಈ ಮಂಗಳಮುಖಿಯರ ಕೃಷಿ ಕಾಯಕ ಇತರರಿಗೆ ಮಾದರಿಯಾಗಿದೆ. ಕುರಿ- ಹಸು ಮೇಯಿಸುತ್ತಾ, ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ಬಾಳು ಕಟ್ಟಿಕೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.