ಕಾಫಿನಾಡಲ್ಲಿಯೂ ಕೇಳಿ ಬಂತು ಮತದಾನ ಬಹಿಷ್ಕಾರದ ಕೂಗು
ಚಿಕ್ಕಮಗಳೂರು, ಮಾರ್ಚ್ 13: ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆ ಬರುತ್ತಿದ್ದಂತೆಯೇ ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ಮತದಾನ ಬಹಿಷ್ಕಾರ ಮಾಡೋದು ಸಾಮಾನ್ಯ. ಆದರೆ ಈ ಬಾರಿ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ ಆದ ಎರಡೇ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ.
ಮರಿತೊಟ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊದಲ ಮನೆಯ ಗ್ರಾಮಸ್ಥರು ಈ ಬಾರೀ ಲೋಕ ಸಭೆ ಚುನಾವಣೆಯ ಮತದಾನ ಬಹಿಷ್ಕಾರ ಮಾಡಿದ್ದಾರೆ. ಗ್ರಾಮದ ದ್ವಾರ ಬಾಗಿಲಿನಲ್ಲಿ ಈ ಬಾರಿ ಮತದಾನ ಬಹಿಷ್ಕಾರ ಎಂದೂ ಬೋರ್ಡ್ ಹಾಕಿದ್ದಾರೆ.
ಮೊದಲ ಮನೆ ಗ್ರಾಮದಲ್ಲಿ 22 ಕ್ಕೂ ಹೆಚ್ಚು ಮನೆಗಳಿದ್ದು, ಈ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆಯಿಲ್ಲ. ವಿದ್ಯುತ್ ಸಂಪರ್ಕವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಂದ ಹಲವಾರು ವರ್ಷಗಳಿಂದ ವಂಚಿತವಾಗಿದ್ದು, ಹಲವಾರು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕಾರಣಕ್ಕಾಗಿ ಈ ಬಾರಿ ಲೋಕಸಭಾ ಚುನಾವಣೆಯ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ.
ಜನಪ್ರತಿನಿಧಿಗಳಿಗೆ ಶುರುವಾಯ್ತು ಚುನಾವಣೆ ಬಹಿಷ್ಕಾರದ ಬಿಸಿ
ತಾಲೂಕು ಕೇಂದ್ರದಿಂದ ಕೇವಲ 5 ಕೀ.ಮೀ. ದೂರದಲ್ಲಿರುವ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ. ಈ ಗ್ರಾಮ ತುಂಬಾ ಇಳಿಜಾರು ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ಜನರು ಮತ್ತು ವಾಹನ ಸಂಚಾರ ಓಡಾಡ ತುಂಬಾ ಕಷ್ಟದಾಯಕವಾಗಿರುತ್ತದೆ.
ವಿದ್ಯುತ್ ಸಂಪರ್ಕವಿದ್ದರೂ ನಾನಾ ಕಾರಣಗಳಿಂದ ವಿದ್ಯುತ್ ಉಪಕರಣ ಬಳಸುವಂತಿಲ್ಲ ಎಂಬ ಆರೋಪಗಳು ಗ್ರಾಮಸ್ಥರು ಮಾಡುತ್ತಿದ್ದು, ಈ ಎಲ್ಲಾ ಕಾರಣಗಳಿಂದ ಗ್ರಾಮಸ್ಥರು ಬೇಸತ್ತು ಮತದಾನ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.