ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಎಂಎಲ್ಸಿ ಭೋಜೇಗೌಡ ಆಕ್ರೋಶ
ಚಿಕ್ಕಮಗಳೂರು, ಜೂನ್ 24: "ಚಿಕ್ಕಮಗಳೂರು ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದೆ, ಯಾವುದೇ ಸಭೆ- ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ,'' ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸಿದರು.
Recommended Video
"ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಕೆ.ಎನ್. ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದರೆ ಪ್ರಿವಿಲೈಜ್ ಮೂವ್ ಮಾಡಿ ಏನೆಂದು ತೋರಿಸುತ್ತಿದ್ದೆ. ಆದರೆ, ಇಲ್ಲಿ ಜಿಲ್ಲಾಧಿಕಾರಿಯನ್ನು ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ,'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಕ್ರೋಶ ಹೊರಹಾಕಿದರು.
"ಜಿಲ್ಲಾ ಮಂತ್ರಿಗಳಿಗೆ ಶಿಷ್ಟಾಚಾರ ಏನೆಂದು ಗೊತ್ತಿಲ್ಲವಾ? ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಹೇಳಿಕೊಡಬೇಕಾ?'' ಎಂದು ಎಂಎಲ್ಸಿ ಎಸ್.ಎಲ್. ಭೋಜೇಗೌಡ ಪ್ರಶ್ನಿಸಿದ್ದಾರೆ.
"ಒಂದೆರಡು ಬಾರಿಯಲ್ಲ, ಹಲವು ಸಲ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲಾ ಅಧಿಕಾರಿಗಳನ್ನು ನೀಡಿದೆ. ಕೈಗೊಬ್ಬ ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ?'' ಎಂದು ಖಾರವಾಗಿ ಪ್ರಶ್ನಿಸಿದರು.
"ಸಚಿವರೇ, ನಿಮ್ಮ ತಿಂಗಳ ಪ್ರವಾಸದ ಕಾಪಿ ಹಾಕುವುದಿಲ್ಲವೇ? ಕಾರ್ಯಕ್ರಮದ ಕಾಪಿಯನ್ನು ಶಾಸಕರಿಗೆ ಏಕೆ ಕಳಿಸಲ್ಲ ಎಂದು ಸಚಿವ ವಿರುದ್ಧ ಕಿಡಿಕಾರಿದ ಭೋಜೇಗೌಡ, ಆರಂಭದಲ್ಲೇ ಜಿಲ್ಲಾ ಮಂತ್ರಿಗಳಿಗೆ ಹೇಳಿದ್ದೇನೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಇದ್ದರೂ ನಿನ್ನದು ಬರಬೇಕು ಕಣಯ್ಯ ಎಂದಿದ್ದೇನೆ. ಅಧಿಕಾರಿಗಳ ಸಭೆಗಳಲ್ಲಿ ಶಾಸಕರು, ಸಂಸದರು ಕೂತಾಗ ಭೋಜೇಗೌಡ ಇರುವುದಿಲ್ಲ ಎಂದು ನಮಗೆ ಬೇರೆಯವರು ಕೇಳುತ್ತಾರೆ,'' ಎಂದರು.
"ನಾನೊಬ್ಬ ಜನಪ್ರತಿನಿಧಿಯಾಗಿ ಸಭೆಗೆ ಹೋಗಿಲ್ಲ ಅಂದರೆ ಜನ ಏನೆಂದುಕೊಳ್ಳುತ್ತಾರೆ. ಶಿಷ್ಟಾಚಾರ ಏನು ನಿರ್ವಹಣೆ ಮಾಡಿದ್ದೀರಾ ನೀವು? ನಾನು ಕೇಳಬಾರದಾ, ನಾನು ಶಾಸಕ ಅಲ್ಲವಾ? 6 ಜಿಲ್ಲೆಗಳ 39 ತಾಲ್ಲೂಕಿನಲ್ಲಿ ನನಗೆ ಪ್ರೋಟೋಕಾಲ್ ಇದೆ. ಇದು ನನ್ನ ನೋಡಲ್ ಕ್ಷೇತ್ರ,'' ಎಂದು ಹೇಳಿದರು.
"ಆ ಶಾಸಕರು, ಈ ಶಾಸಕರನ್ನು ಕರೆಯಬಾರದು ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ, ನನಗೆ ಅದು ಗೊತ್ತಿದೆ. ನಿಮ್ಮ ಗುಂಪುಗಾರಿಕೆ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಸಚಿವರು ಬರುವಾಗ ಶಿಷ್ಟಾಚಾರ ನಿರ್ವಹಣೆ ಮಾಡಬೇಕು. ಮುಂದಿನ ಬಾರಿ ನಾನು ಇಂಥಾ ನಡುವಳಿಕೆ ಸಹಿಸುವುದಿಲ್ಲ,'' ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಸಚಿವ ಎಸ್. ಅಂಗಾರ ವಿರುದ್ಧ ಎಂಎಲ್ಸಿ ಎಸ್.ಎಲ್. ಭೋಜೇಗೌಡ ಕೆಂಡಾಮಂಡಲರಾದರು.