ದಾಂಪತ್ಯ ಕಲಹ: ಪ್ರತಿಕ್ರಿಯೆ ನೀಡಿದ ಮೂಡಿಗೆರೆ ಶಾಸಕ ಕುಮಾರಸ್ವಾಮಿ
ಚಿಕ್ಕಮಗಳೂರು, ಜನವರಿ 20: ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರ ಅತ್ತೆ ಪ್ರೇಮಕುಮಾರಿ ಮೈಸೂರಿನಲ್ಲಿ ಶನಿವಾರ (ಜ.19ರಂದು) ಸುದ್ದಿಗೋಷ್ಠಿ ನಡೆಸಿ ಶಾಸಕ ಕುಮಾರಸ್ವಾಮಿ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಆರೋಪಿಸಿದ್ದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಹಾಗೂ ಸ್ಪೀಕರ್ ಗೆ ದೂರು ನೀಡುವುದಾಗಿ ತಿಳಿಸಿದ ಪ್ರೇಮಕುಮಾರಿ, ತನ್ನ ಹೆಂಡತಿಯನ್ನೇ ಸರಿಯಾಗಿ ನೋಡಿಕೊಳ್ಳದ ಶಾಸಕ ಹೇಗೆ ಆಡಳಿತ ಮಾಡುತ್ತಾರೆ. ಹೆಣ್ಣಿಗೆ ಗೌರವ ತೋರದ ಬಿಜೆಪಿ ನಾಯಕರು ರಾಜ್ಯಭಾರ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು.
'ಚಿಕ್ಕಮಗಳೂರಿಗೆ ಬನ್ನಿ'.. ಸಿಎಂಗೆ ಕೈ ಮುಗಿದು ಮನವಿ ಮಾಡಿದ ಶಾಸಕ
ಈ ವಿಚಾರವಾಗಿ ಇಂದು ಪ್ರತಿಕ್ರಯಿಸಿರುವ ಶಾಸಕ ಎಂ.ಪಿ ಕುಮಾರಸ್ವಾಮಿ ನಾನು ಆ ವಿಚಾರವನ್ನು ಕೋರ್ಟ್ ನಲ್ಲೇ ತೀರ್ಮಾನಿಸಿಕೊಳ್ಳುತ್ತೇನೆ. ಈ ವಿಚಾರವನ್ನು ತೆಗೆದುಕೊಂಡು ಸ್ಪೀಕರ್ ರಮೇಶ್ ಕುಮಾರ್ ಬಳಿ ಹೋಗಲು ತೀರ್ಮಾನಿಸಿದ್ದಾರೆ.
ಆದರೆ ಸ್ಪೀಕರ್ ಹಿರಿಯರು. ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಎಂ.ಎಲ್.ಎ ಆದ ಮೇಲೆ ಮಗನಿದ್ದಂತೆ ಎನ್ನುತ್ತಿದ್ದರು. ಅದೇ ಸೋತಾಗ ನಾನು ಅತ್ತೆ ಪ್ರೇಮಕುಮಾರಿ ಅವರಿಗೆ ಮಗನಲ್ಲವಾ? ನೆನಪಾಗಿಲ್ವ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚೇನೂ ಮಾತನಾಡಲಾರೆ ಎಂದು ತಿಳಿಸಿದ್ದಾರೆ.
2009ರಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಹಾಗೂ ಸವಿತಾ ಅವರು ವಿವಾಹವಾಗಿದ್ದರು. 2015ರಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಅಂದಿನಿಂದ ಹೆಂಡತಿ ತಾಯಿ ಮನೆಯಲ್ಲೇ ವಾಸವಾಗಿದ್ದರು. ಈ ವಿಚಾರವಾಗಿ ಸವಿತಾ ಅವರು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಮೂರು ತಿಂಗಳ ಹಿಂದೆ, ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶ ನೀಡಿ 3 ತಿಂಗಳಾದರೂ ಕುಮಾರಸ್ವಾಮಿ ಅವರು ಹೆಂಡತಿಯನ್ನ ಮನೆಗೆ ಕೆರದುಕೊಂಡು ಹೋಗಿಲ್ಲ.