ಕಾಫಿಯನ್ನೇ ಕುಡಿಯಲ್ಲ, ಡ್ರಿಂಕ್ಸ್ ಹೇಗೆ ಮಾಡ್ತಾರೆ?:ಸಿ.ಟಿ.ರವಿ ಪತ್ನಿ
ಚಿಕ್ಕಮಗಳೂರು, ಫೆಬ್ರವರಿ 19:ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣ ಸಂಬಂಧ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.
"ಅಪಘಾತದಲ್ಲಿ ದುರ್ಮರಣ ಹೊಂದಿದ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಯಸುತ್ತೇನೆ, ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ, ಮದ್ಯ ಸೇವಿಸಿದ್ದಾರೆ ಅನ್ನೋದು ಶುದ್ಧ ಸುಳ್ಳು" ಅಂತ ಸಿಟಿ ರವಿ ಅವರ ಪತ್ನಿ ಪಲ್ಲವಿ ಹೇಳಿದ್ದಾರೆ.
ಕಾರು ಅಪಘಾತ ಪ್ರಕರಣ: ವಿಡಿಯೋ ಮೂಲಕ ಸಿಟಿ ರವಿ ಪ್ರತಿಕ್ರಿಯೆ
"ಮಾಧ್ಯಮದಲ್ಲಿ ಮದ್ಯ ಸೇವಿಸಿದ್ದಾರೆ ಅನ್ನೋದನ್ನು ನೋಡಿ ನನಗೆ ಬೇಸರದ ಜೊತೆ ಶಾಕ್ ಕೂಡ ಆಯ್ತು. ನನ್ನ ಪತಿ ನೀರು ಕುಡಿಯೋದು ಬಿಟ್ಟು, ಬೇರೆ ಏನು ಕುಡಿದಿರೋದು ನೋಡಿಲ್ಲ.ರಾತ್ರಿ 12 ಗಂಟೆಗೆ ಅವರು ಮನೆ ಬಿಟ್ಟಿದ್ದರು. ಚೆನ್ನೈಯಲ್ಲಿ ಮೀಟಿಂಗ್ ಇದ್ದಿದ್ರಿಂದ 6 ಗಂಟೆಗೆ ಫ್ಲೈಟ್ ಗೆ ಹೊರಟಿದ್ರು. ಈ ಅಪಘಾತದಿಂದ ನನಗೂ ಶಾಕ್ ಆಯ್ತು, ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ, ಅದು ನಿಜವಾಗಿಯೂ ಬೇಸರದ ವಿಷಯ. ಈ ಅಪಘಾತ ಆಕಸ್ಮಿಕ, ಮೃತ ಯುವಕರ ಕುಟುಂಬಸ್ಥರ ಮನೆಗೆ ಹೋಗಿ ಸಾಂತ್ವಾನ ಹೇಳುತ್ತೇವೆ. ನಮ್ಮ ಕೈಯ್ಯಲ್ಲಿ ಏನಾಗುತ್ತೋ ಆ ರೀತಿಯ ಸಹಾಯ ಮಾಡುತ್ತೇವೆ" ಎಂದು ಪಲ್ಲವಿ ತಿಳಿಸಿದ್ದಾರೆ.
ಕಾರು ಡ್ರೈವ್ ಮಾಡೋದು ಬಿಟ್ಟು 15 ವರ್ಷ ಆಗಿದೆ
ಇಂದು ಬೆಳಗಿನ ಜಾವ ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ಊರ್ಕೇನಹಳ್ಳಿ ಬಳಿ ಪ್ರವಾಸಕ್ಕೆಂದು ತೆರಳಿದ್ದ ಸುಮಾರು 12 ಯುವಕರು, ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸಿಟಿ ರವಿ ಅವರಿದ್ದ ಕಾರು ಮೂವರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರು ಮೃತರಾದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಟಿ ಅವರ ಪತ್ನಿ ಪಲ್ಲವಿ "ನನ್ನ ಪತಿ ಕಾರು ಡ್ರೈವ್ ಮಾಡೋದು ಬಿಟ್ಟು 15 ವರ್ಷ ಆಗಿದೆ" ಎಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಿಟಿ ರವಿ
ಕಾರು ಅಪಘಾತದ ನಂತರ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದ ಶಾಸಕ ಸಿಟಿ ರವಿ, "ಈ ಘಟನೆ ತೀರಾ ದುರದೃಷ್ಟಕರ. ನಾವು ಚೆನ್ನೈಗೆ ಹೊರಟಿದ್ದ ಸಂದರ್ಭದಲ್ಲಿ ತುಮಕೂರಿನ ಬಳಿ ಅಪಘಾತ ಸಂಭವಿಸಿದೆ. ಕಾರನ್ನು ನನ್ನ ಡ್ರೈವರ್ ಆಕಾಶ್ ಎಂಬುವವರು ಚಲಾಯಿಸುತ್ತಿದ್ದರು. ಜೊತೆಗೆ ಗನ್ ಮ್ಯಾನ್ ರಾಜಾ ನಾಯಕ್ ಎಂಬುವವರು ನನ್ನೊಂದಿಗಿದ್ದರು.ನಾನು ನಿದ್ದೆ ಮಾಡಿದ್ದೆ. ಇದ್ದಕ್ಕಿದ್ದಂತೆ ಏರ್ ಬ್ಯಾಗ್ ಓಪನ್ ಆದಾಗಲೇ ನನಗೆ ಎಚ್ಚರವಾಗಿದ್ದು. ಎಚ್ಚರವಾದಾಗ ನನ್ನ ಎದೆ ನೋಯುತ್ತಿತ್ತು. ಕೆಲವೆಡೆ ತರಚಿದ ಗಾಯಗಳಾಗಿದ್ದರಿಂದ ಉರಿಯುತ್ತಿತ್ತು. ನಂತರ ನಾನು ಕಾರಿನಿಂದ ಕೆಳಗಿಳಿದು ನೋಡಿದರೆ ಇಬ್ಬರು ನಿಧನರಾಗಿದ್ದರು. ತಕ್ಷಣ ನಾನೇ ಅಂಬುಲೆನ್ಸ್ ಗೆ ಫೋನ್ ಮಾಡಿದೆ. ಪೊಲೀಸರಿಗೂ ಫೋನ್ ಮಾಡಿದೆ. ಅಂಬುಲೆನ್ಸ್ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಮತ್ತು ಪೊಲೀಸರು ಮೃತರನ್ನು ವಶಕ್ಕೆ ಪಡೆಯುವವರೆಗೂ ನಾನು ಅಲ್ಲಿಯೇ ಇದ್ದೆ. ನಂತರ ಪೊಲೀಸ್ ಅಧಿಕಾರಿಯೇ ನನಗೆ ಹೊರಡಲು ಅನುಮತಿ ನೀಡಿದ ಮೇಲೆ ಹೊರಟೆ" ಎಂದು ತಿಳಿಸಿದ್ದರು.
ಸಿಟಿ ರವಿ ಕಾರು ಅಪಘಾತ ಪ್ರಕರಣ: ಬಿಜೆಪಿ ನೀಡಿದ ಸ್ಪಷ್ಟೀಕರಣವೇನು?
ಶಶಿಕುಮಾರ್ ತಂದೆ ಜಯರಾಮ್ ಹೇಳಿದ್ದು ಹೀಗೆ
ಇನ್ನು ಕಾರು ಅಪಘಾತದಲ್ಲಿ ಮೃತಪಟ್ಟ ಶಶಿಕುಮಾರ್ ಅವರ ತಂದೆ ಜಯರಾಮ್, 'ಅವರೆಲ್ಲ ದೊಡ್ಡವರು ಸ್ವಾಮಿ, ನಮಗೆಲ್ಲಿ ನ್ಯಾಯ ಸಿಗುತ್ತೆ ಹೇಳಿ''ಎಂದು ಹೇಳುತ್ತಿದ್ದ ದೃಶ್ಯ ಎಂಥವರ ಮನಕಲಕುವಂತಿತ್ತು. ಮಗನ ಸಾವಿನ ನೋವಿನಲ್ಲಿಯೇ ಪ್ರತಿಕ್ರಿಯೆ ನೀಡಿದ ಶಶಿಕುಮಾರ್ ತಂದೆ, "ನಮ್ಮಂಥವರಿಗೆಲ್ಲ ಎಲ್ಲಿ ನ್ಯಾಯ ಸಿಗುತ್ತೆ, ಕಾರು ಬಂದು ಮಕ್ಕಳಿಗೆ ಗುದ್ದಿದಾಗ ಅವರಿಗಿನ್ನು ಜೀವ ಇತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಪ್ರಾಣ ಉಳಿಯುತ್ತಿತ್ತೇನೋ ಆದರೆ ಆ ಕೆಲಸವನ್ನು ಅವರು ಮಾಡಿಲ್ಲ. ಶಶಿಕುಮಾರ್ ಅತ್ತಿಬೆಲೆಯಲ್ಲಿ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ, ಬೈಕ್ ಬೇಕೇ ಬೇಕು ಎಂದಿದ್ದಕ್ಕೆ ಸ್ವಲ್ಪ ದಿನಗಳ ಹಿಂದೆ ಬೈಕ್ ಕೊಡ್ಸಿದ್ದೆ, ಆದರೆ ಇಷ್ಟು ಬೇಗ ಮಗ ಈ ರೀತಿ ಕಳೆದು ಹೋಗ್ತಾನೆ ಅಂದುಕೊಂಡಿರಲಿಲ್ಲ, ನಮಗೆ ಇನ್ಯಾರು ಆಸರೆ ತಂದೆಯೇ ಎದುರೇ ಮಗನ ಸಾವು ನೋಡುವ ಪರಿಸ್ಥಿತಿ ಬಂದುಬಿಡ್ತು" ಎಂದು ಕಣ್ಣೀರಿಟ್ಟರು.
ಊರ್ಕೇನಹಳ್ಳಿ ಎಂಬಲ್ಲಿ ಕಾರು ಅಪಘಾತ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ರಸ್ತೆಯಲ್ಲಿ ನಿಂತಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತರಾದ ದುರ್ಘಟನೆ ಇಂದು ಮಂಗಳವಾರ ಬೆಳಗ್ಗಿನ ಜಾವ ನಡೆದಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ಊರ್ಕೇನಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿತ್ತು. ಪ್ರವಾಸಕ್ಕೆಂದು ತೆರಳಿದ್ದ ಸುಮಾರು 12 ಯುವಕರು, ಊರ್ಕೇನಹಳ್ಳಿ ಬಳಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸಿಟಿ ರವಿ ಅವರಿದ್ದ ಕಾರು ಮೂವರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರು ಮೃತರಾದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಶಶಿಕುಮಾರ್ ಮತ್ತು ಸುನಿಲ್ ಎಂಬುವವರು ಮೃತರಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯ ನಂತರ ಸ್ಥಳ ಮಹಜರು ಮಾಡದೆ ವಾಹನವನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿತ್ತು.