ಕೊರೊನಾ ಲಾಕ್ ಡೌನ್ ನಡುವೆ ಅಪ್ಪಟ ರೈತನಾದ ಸಿ.ಟಿ.ರವಿ
ಚಿಕ್ಕಮಗಳೂರು, ಏಪ್ರಿಲ್ 08: ಕೊರೊನಾ ವ್ಯಾಪಕವಾಗುತ್ತಿರುವುದರಿಂದ ದೇಶವೇ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ಕೆಲ ಸಚಿವರು ಹಾಗೂ ಶಾಸಕರು ಅವರವರ ಕ್ಷೇತ್ರದಲ್ಲೇ ಇಲ್ಲ.
ಈ ನಡುವೆ ಕ್ಷೇತ್ರದಲ್ಲೇ ಇದ್ದುಕೊಂಡು ಕೊರೊನಾ ಸ್ಥಿತಿಗತಿ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವ ಚಿಕ್ಕಮಗಳೂರು ಉಸ್ತುವಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಪ್ಪಟ ರೈತನಾಗಿದ್ದಾರೆ.
ರಾಯಚೂರು; ಗಂಗಮ್ಮ ಕುಟುಂಬದ ನೆರವಿಗೆ ನಿಂತ ಯಡಿಯೂರಪ್ಪ
ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸಿ.ಟಿ.ರವಿ ತಮ್ಮ ಬಿಡುವಿನ ವೇಳೆಯನ್ನು ಭೂಮಿ ಕೆಲಸ ಮಾಡುವ ಮೂಲಕ ಕಳೆಯುತ್ತಿದ್ದಾರೆ. ನಿನ್ನೆ ಟ್ರ್ಯಾಕ್ಟರ್ ಏರಿ ಒಂದು ಗಂಟೆಗಳ ಕಾಲ ಭೂಮಿ ಹದ ಮಾಡಿದ್ದಾರೆ. ನಿನ್ನೆ ನಗರದಲ್ಲಿ ಉತ್ತಮ ಮಳೆಯಾಗಿದ್ದು ಭೂಮಿ ಕೂಡ ಹಸಿಯಾಗಿರುವುದರಿಂದ ತಾವೇ ಟ್ರ್ಯಾಕ್ಟರ್ ಏರಿ ಭೂಮಿ ಹದ ಮಾಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಈ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವ ಸಿ.ಟಿ.ರವಿ, ನಗರದ ನಿರಾಶ್ರಿತರು ಹಾಗೂ ಬಡವರಿಗೆ ಆಹಾರದ ಸಾಮಗ್ರಿ ವಿತರಣೆಯನ್ನೂ ಮಾಡಿದ್ದಾರೆ. ಜಿಲ್ಲೆಯ ಹಲವೆಡೆ ಭೇಟಿ ನೀಡಿ, ಕೊರೊನಾ ತಡೆಗೆ ಹಾಗೂ ಕೊರೊನಾ ಜಿಲ್ಲೆಗೆ ಬಾರದಂತೆ ಸೂಕ್ತ ಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.