ನಾನು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ; ಸಿ.ಟಿ.ರವಿ
ಚಿಕ್ಕಮಗಳೂರು, ನವೆಂಬರ್ 03: "ನಾನು ಹೊಗಳಿಸಿಕೊಂಡು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ. ಹಾಗೆ ಮಾಡಿದ್ದರೆ 2012ಕ್ಕೂ ಮೊದಲೇ ನಾನು ಮಂತ್ರಿಯಾಗುತ್ತಿದ್ದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ" ಎಂದಿದ್ದಾರೆ ಸಚಿವ ಸಿ.ಟಿ.ರವಿ.
Recommended Video
ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, "ಮಂತ್ರಿ ಸ್ಥಾನ ನನಗೆ ಸಿಕ್ಕಿರುವ ಅಧಿಕಾರ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರುವ ಜವಾಬ್ದಾರಿ. ಈ ಎರಡರಲ್ಲಿಯೂ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಅಧಿಕಾರದ ವ್ಯಾಮೋಹ ಜವಾಬ್ದಾರಿಯ ಕೆಲಸಕ್ಕೆ ಹಿನ್ನಡೆ ಆಗಬಾರದು. ನಿನ್ನೆಯೂ ನನ್ನ ರಾಜೀನಾಮೆ ಅಂಗೀಕರಿಸುವಂತೆ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ" ಎಂದು ತಿಳಿಸಿದರು.
ಯೋಗ್ಯತೆ ಇರುವ ಯಾರು ಬೇಕಾದರೂ ಕರ್ನಾಟಕ ಸಿಎಂ ಆಗಬಹುದು: ಸಿ.ಟಿ ರವಿ
ಮಂಗಳವಾರ ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆಯ ಮತದಾನ ನಡೆದಿದ್ದು, ಆರ್ ಆರ್ ನಗರದಲ್ಲಿ 25 ಸಾವಿರ, ಶಿರಾದಲ್ಲಿ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೋಲುವುದು ಗ್ಯಾರಂಟಿ ಆದ ಮೇಲೆ ಇವಿಎಂ ಮೇಲೆ ಆರೋಪಿಸುತ್ತಿದ್ದಾರೆ. ಗೆದ್ದರೆ ಜನಾದೇಶ, ಸೋತರೆ ಇವಿಎಂ ಕಾರಣ ಅಂತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಸಾಧ್ಯವಿಲ್ಲ. ಇವಿಎಂಗೆ ನೆಟ್ ಇರಲ್ಲ, ಈ ಆರೋಪಕ್ಕೆ ಅವರು ಸಾಕ್ಷಿ ನೀಡಿಲ್ಲ. ಚುನಾವಣಾ ಆಯೋಗದ ನೋಟೀಸ್ ಗೆ ಉತ್ತರಿಸಲಾಗದೆ ತಡಬಡಿಸಿದ್ದರು. ಕಾಂಗ್ರೆಸ್ಸಿಗೆ ಇದೊಂದು ಕೆಟ್ಟ ಕಾಯಿಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ತೀರ್ಪು ಬಂದರೆ ನ್ಯಾಯಾಧೀಶರನ್ನು ಅನುಮಾನಿಸುವುದು, ಚುನಾವಣೆಯಲ್ಲಿ ಸೋತರೆ ಆಯೋಗ, ಇವಿಎಂ ಮೇಲೆ ಗೂಬೆ ಕೂರಿಸೋದು ಇವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ವ್ಯಂಗ್ಯವಾಡಿದರು.
ಬಿಹಾರ ಚುನಾವಣೆಯ ಕುರಿತು ಪ್ರತಿಕ್ರಿಯಿಸಿ, "ಬಿಹಾರದಲ್ಲಿ ಮತ್ತೆ ಎನ್.ಡಿ.ಎ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎನ್ನುತ್ತಿದ್ದಾರೆ. ಆಂತರಿಕ ವರದಿ ನಿತೀಶ್ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದೆ. ಜನರಿಗೆ ಕೇಂದ್ರದ ಯೋಜನೆಯ ಲಾಭ ತಲುಪಿದೆ. ಇದರಿಂದ ಸೈಲೆಂಟ್ ಓಟರ್ಸ್, ಮಹಿಳೆಯರು ಬಿಜೆಪಿಗೆ ಮತ ಹಾಕುತ್ತಾರೆ" ಎಂದು ಹೇಳಿದರು.