ಆಯುರ್ವೇದಿಕ್ ಔಷಧಿ ಸೇವಿಸಿ ಕೊರೊನಾ ವೈರಸ್ ಗೆದ್ದ ಸಚಿವ ಸಿ.ಟಿ ರವಿ
ಚಿಕ್ಕಮಗಳೂರು, ಜುಲೈ 23: ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಸಚಿವ ಸಿ.ಟಿ ರವಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು, ಈಗ ಅವರು ಪ್ರತಿದಿನ ಆಯುರ್ವೇದಿಕ್ ಔಷಧಿಗಳನ್ನು ಸೇವಿಸಿ ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ.
ಜುಲೈ 06 ರಂದು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರಿಗೆ ಸೋಂಕು ತಗುಲಿದ ಪರಿಣಾಮ ಸಿ.ಟಿ ರವಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಆದರೆ ಮೊದಲಿಗೆ ನೆಗೆಟಿವ್ ಬಂದಿತ್ತು. ಮತ್ತೊಮ್ಮೆ ಬೆಂಗಳೂರಿನಲ್ಲಿ ಟೆಸ್ಟ್ ಮಾಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.
ಪ್ರವಾಸೋದ್ಯಮ ಸಚಿವ ಸಿಟಿ ರವಿಗೆ ಕೊರೊನಾ ಪಾಸಿಟಿವ್!
ಆದರೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇರದಿದ್ದ ಕಾರಣ ಮತ್ತೊಮ್ಮೆ ಮೂರನೇ ಬಾರಿ ಟೆಸ್ಟ್ ಮಾಡಿಸಿ ಥರ್ಡ್ ಅಂಪೈರ್ ಮೊರೆಹೋಗಿದ್ದೇನೆ ಎಂದು ಸಚಿವ ಸಿ.ಟಿ ರವಿ ಸಾಮಾಜಿಕ ತಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಮೂರನೇ ವರದಿಯೂ ಪಾಸಿಟಿವ್ ಬಂದ ಕಾರಣ ಚಿಕ್ಕಮಗಳೂರಿನ ರಾಮನಹಳ್ಳಿ ಸಮೀಪದ ಫಾರಂ ಹೌಸ್ ನಲ್ಲಿ ಹೋಂ ಕ್ವಾರಂಟೈನ್ ಆಗಿದ್ದರು.
ಈ ವೇಳೆ ಅವರು ಆಯುರ್ವೇದಿಕ್ ವೈದ್ಯ ಗಿರಿಧರ್ ಕಜೆ ಅವರ ಸಲಹೆ ಪ್ರಕಾರ ಹತ್ತು ದಿನ ಆಯುರ್ವೇದಿಕ್ ಮಾತ್ರೆ ಮತ್ತು ಬೆಳಿಗ್ಗೆ, ಸಂಜೆ ನಿಯಮಿತವಾಗಿ ಅಮೃತಬಳ್ಳಿ ಕಷಾಯ ಕುಡಿದು ಕೊರೊನಾ ವೈರಸ್ ನಿಂದ ಹೊರಬಂದಿದ್ದಾರೆ.
ಈ ವೇಳೆ ಬೇರೆ ಯಾವುದೇ ಮಾತ್ರೆ ಸೇವಿಸಿಲ್ಲ ಜೊತೆಗೆ ವ್ಯಾಯಾಮ, ಯೋಗವನ್ನು ಕ್ರಮಬದ್ಧವಾಗಿ ಮಾಡಿದ್ದು, ಬಿಸಿ ನೀರನ್ನು ಹೆಚ್ಚು ಸೇವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಕ್ವಾರಂಟೈನ್ ಅವಧಿ ಮುಗಿದಿದ್ದು, ಶೀಘ್ರವಾಗಿ ಜನಸೇವೆಗೆ ಮರಳುವುದಾಗಿ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.