ಈ ಸಾವು ನ್ಯಾಯವೇ?; ಕನಸು ಕಂಗಳ ಹುಡುಗಿ ಬಲಿ ಪಡೆದ ರಸ್ತೆಗುಂಡಿ
23ರ ಹರೆಯದ ಆಕೆಯಲ್ಲಿ ಭವಿಷ್ಯದ ಬಗ್ಗೆ ಕಣ್ತುಂಬ ಕನಸುಗಳಿದ್ದವು. ಚೆನ್ನಾಗಿ ಓದಿ ಎಂಜಿನಿಯರಿಂಗ್ ಪದವಿ ಗಿಟ್ಟಿಸಿ ಬೆಂಗಳೂರಿನ ಕಂಪನಿಯೊಂದಕ್ಕೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಕೂಡ ಆಗಿದ್ದಳು. ಕೆಲವೇ ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದಳು ಕೂಡ. ಆದರೆ ವಿದೇಶಕ್ಕೆ ಹಾರುವ ತನ್ನ ಕನಸು ನನಸು ಮಾಡಿಕೊಳ್ಳಲು ದಿನ ಎಣಿಸುತ್ತಿದ್ದ ಆಕೆ ಈಗ ಬಾರದ ಲೋಕಕ್ಕೆ ಹೊರಟು ಹೋಗಿದ್ದಾಳೆ.
ಇಷ್ಟೆಲ್ಲಾ ಆಗಿದ್ದು ಯಕಶ್ಚಿತ್ ರಸ್ತೆಯಲ್ಲಿನ ಒಂದು ಗುಂಡಿಯಿಂದ.
ಚಿಕ್ಕಮಗಳೂರಿನಲ್ಲಿ ಯುವತಿ ಬಲಿ ಪಡೆದ ರಸ್ತೆ ಗುಂಡಿ, ಸಂಘಟನೆಗಳ ಪ್ರತಿಭಟನೆ
ಚಿಕ್ಕಮಗಳೂರಿನಲ್ಲಿ ನಿನ್ನೆ ದಂಟರಮಕ್ಕಿ ರಸ್ತೆಯಲ್ಲಿ ಗುಂಡಿಯ ಕಾರಣವಾಗೇ ಅಪಘಾತವಾಗಿ ಸಿಂಧುಜಾ ಎಂಬ ಯುವತಿ ಸಾವನ್ನಪ್ಪಿದ್ದು, ಈ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂಬ ಕೂಗು ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಅನ್ಯಾಯವಾಗಿ ಒಬ್ಬ ಯುವತಿ ಸಾವನ್ನಪ್ಪಿದ್ದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತಗೊಂಡಿದೆ.
ಪಾಸ್ ಪೋರ್ಟ್ ವೇರಿಫಿಕೇಷನ್ ಗೆ ತೆರಳಿದ್ದ ಸಿಂಧುಜಾ
ತರೀಕೆರೆ ತಾಲ್ಲೂಕು ಅಜ್ಜಂಪುರದ ಸಿಂಧುಜಾ ಭದ್ರಾವತಿಯಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಳು. ಅಲ್ಲೇ ಬೆಂಗಳೂರಿನ ಟಿಸಿಎಸ್ ಕಂಪನಿಗೆ ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿ ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಸೇರಿದ್ದಳು. ಅಲ್ಲಿ ವಿದೇಶಕ್ಕೆ ಹೋಗುವ ಅವಕಾಶವಿದ್ದು, ಪಾಸ್ಪೋರ್ಟ್ ಬೇಕೆಂದು ತಿಳಿಸಿದ್ದರು. ಈ ಕಾರಣವಾಗಿ ಊರಿಗೆ ಬಂದಿದ್ದ ಸಿಂಧುಜಾ, ಪಾಸ್ ಪೋರ್ಟ್ ವೇರಿಫಿಕೇಷನ್ ಗಾಗಿ ನಗರ ಪೊಲೀಸ್ ಠಾಣೆಗೆ ತಂದೆ ಕುಮಾರಪ್ಪ ಜತೆ ಬೈಕ್ನಲ್ಲಿ ತೆರಳುತ್ತಿದ್ದಳು. ಆ ವೇಳೆ ದಂಟರಮಕ್ಕಿ ಸಮೀಪ ರಸ್ತೆಯಲ್ಲಿನ ಭಾರಿ ಗುಂಡಿಯನ್ನು ಗಮನಿಸದ ಸಿಂಧುಜಾ ತಂದೆ ಬೈಕನ್ನು ಗುಂಡಿಯಲ್ಲಿ ಇಳಿಸಿದ್ದರು. ಇದರಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಸಿಂಧುಜಾ ಗಂಭೀರವಾಗಿ ಗಾಯಗೊಂಡಿದ್ದಳು. ಚಿಕಿತ್ಸೆಗಾಗಿ ಹಾಸನಕ್ಕೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾಳೆ. ರಸ್ತೆ ಸರಿ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ ಎಂದು ಕುಮಾರಪ್ಪ ಅವರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರು ತಿಂಗಳ ಹಿಂದಷ್ಟೇ ತಂದೆ ವರ್ಗಾವಣೆ
ಸಿಂಧುಜಾ ತಂದೆ ಕುಮಾರಪ್ಪ ಭದ್ರಾವತಿಯ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದಷ್ಟೇ ಅವರಿಗೆ ಅಜ್ಜಂಪುರಕ್ಕೆ ವರ್ಗಾವಣೆಯಾಗಿತ್ತು. ಮಗಳಿಗೆ ಒಳ್ಳೆಯ ಕೆಲಸ ಸಿಕ್ಕಿದ ಕಾರಣ ಮನೆಯಲ್ಲಿ ಎಲ್ಲರೂ ಖುಷಿಯಲ್ಲಿದ್ದರು. ಆಕೆ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನೂ ತಂದೆ ತಾಯಿ ಇಟ್ಟುಕೊಂಡಿದ್ದರು. ಆದರೆ ಆ ಖುಷಿಯನ್ನು ಈ ರಸ್ತೆ ಕಸಿದುಕೊಂಡಿದೆ.
ಜನರ ಸುರಕ್ಷತೆ ಮುಖ್ಯ ಎಂದು ರಸ್ತೆ ಗುಂಡಿಗಳನ್ನು ಮುಚ್ಚಿದ ಟ್ರಾಫಿಕ್ ಪೊಲೀಸರು
ಈ ಸಾವು ನ್ಯಾಯವೇ?; ಬೀದಿಗಿಳಿದ ಸಂಘಟನೆಗಳು
ಯುವತಿ ಸಾವಿನ ಬಳಿಕ ಎಚ್ಚೆತ್ತಿರುವ ಸಂಘಟನೆಗಳು ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್, ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳು ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು. ಜಿಲ್ಲಾ ಕಾಂಗ್ರೆಸ್ ಸಂಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆಗಿಡ, ಅಡಿಕೆ ಸಸಿ ನೆಟ್ಟು ಪ್ರತಿಭಟನೆ ನಡೆಸಿತು. ಯುವತಿ ಸಿಂದೂಜಾ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಗೊಂಡಿದ್ದು, ಗುಂಡಿ ಮುಚ್ಚದ ಪಿಡಬ್ಲುಡಿ ವಿರುದ್ಧ ಹಾಗೂ ಸಚಿವ ಸಿ.ಟಿ ರವಿ ಫೋಟೋಗೆ ನೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ ರವಿ ಟ್ವೀಟ್ ಗೆ ಭಾರೀ ಆಕ್ರೋಶ
ನಿನ್ನೆ ಚಿಕ್ಕಮಗಳೂರಿನ ದಂಟರಮಕ್ಕಿ ರಸ್ತೆಯಲ್ಲಿ ಆದ ಅಪಘಾತ ದುರದೃಷ್ಟಕರ. ಸಿಂಧುಜಾ ಅವರ ಅತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ, ರವಿ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ವಿರುದ್ಧವೂ ಆಕ್ರೋಶ ವ್ಯಕ್ತಗೊಂಡಿದೆ. ಮೊದಲು ರಸ್ತೆ ಸರಿಪಡಿಸಿ ಸಚಿವರೇ, ಈ ರಸ್ತೆ ಒಂದು ಜೀವವನ್ನೇ ಬಲಿ ತೆಗೆದುಕೊಂಡಿತಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಬಿಎಂಪಿಯು ರಾತ್ರಿ ಮುಚ್ಚಿದ ಗುಂಡಿಗಳು ಒಂದೇ ಮಳೆಗೆ ಬಾಯ್ತೆರೆದಿವೆ
ಸಚಿವರ ವಿರುದ್ಧ ಮಹಿಳೆಯ ವಿಡಿಯೋ ವೈರಲ್
ಜಿಲ್ಲೆಯಲ್ಲಿ ರಸ್ತೆ ಸರಿಪಡಿಸದ್ದ ಕಾರಣಕ್ಕೆ ಈ ಸಾವು ಸಂಭವಿಸಿದ್ದು, ಇದಕ್ಕೆ ಸಚಿವರ ಬೇಜವಾಬ್ದಾರಿಯೇ ಕಾರಣವೆಂದು ಆರೋಪಿಸಿ ಮಹಿಳೆಯೊಬ್ಬರು ಮಾಡಿರುವ ವೀಡಿಯೋ ವೈರಲ್ ಆಗಿದೆ. ನಿಮಗೆ ಜೀವದ ಬೆಲೆ ಗೊತ್ತಿದ್ಯಾ ಎಂದು ಸಚಿವರಿಗೆ ಪ್ರಶ್ನೆ ಹಾಕಿದ್ದು, ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈ ರೀತಿಯ ದುರದೃಷ್ಟಕರ ಘಟನೆ ನಡೆಯುತ್ತಿರಲಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.