ಸಿಂಗಪುರಕ್ಕೆ ಹೋಗಿ ಕ್ಯಾಸಿನೊ ಆಡಿ ಬರುತ್ತಾರೆ: ಸಿಟಿ ರವಿ
ಚಿಕ್ಕಮಗಳೂರು, ಫೆಬ್ರವರಿ 24: ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೊ ತೆರೆಯುವ ಸರ್ಕಾರದ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಸಚಿವರು ಕ್ಯಾಸಿನೊ ತೆರೆಯುವ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮುಂಚೂಣಿಯಲ್ಲಿದ್ದಾರೆ.
ಕ್ಯಾಸಿನೊ ತೆರೆಯುವ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಟೀಕಿಸಿದ ಬೆನ್ನಲ್ಲೆ ಅವರಿಗೆ ಪ್ರತಿ ಹೇಳಿಕೆ ನೀಡಿರುವ ಸಚಿವ ಸಿ.ಟಿ.ರವಿ, 'ಇಲ್ಲಿ ಸಂಭಾವಿತರು ಎಂದು ಹೇಳಿಕೊಳ್ಳುವವರು ಸಿಂಗಪುರಕ್ಕೆ ಹೋಗಿ ಕ್ಯಾಸಿನೋದಲ್ಲಿ ದುಡ್ಡು ಚೆಲ್ಲಿ ಬರುತ್ತಾರೆ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೂ ಟಾಂಗ್ ನೀಡಿರುವ ಸಿ.ಟಿ.ರವಿ, 'ಯಾವ-ಯಾವ ಗೆಳೆಯರು ಕ್ಯಾಸಿನೋಕ್ಕೆ ಹೋದರೆ ಮೂರು-ಮೂರು ದಿನ ಹೊರಕ್ಕೆ ಬರುತ್ತಿರಲಿಲ್ಲ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು, ಆರೋಪ ಮಾಡುವವರು ಎಷ್ಟು ಸಾಚಾ ಎಂದು ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ.
'ಬೆಳಗಾವಿಯಲ್ಲಿ ಅಧಿವೇಶನ ಮಾಡಿದಾಗ, ಎಷ್ಟು ಮಂದಿ ಶಾಸಕರು, ಅಧಿಕಾರಿಗಳು ಗೋವಾಕ್ಕೆ ಹೋಗಿ ಕ್ಯಾಸಿನೋ ಆಡಿ ಬರುತ್ತಾರೆ ಎಂಬುದು ಗೊತ್ತಿರದ ವಿಷಯವೇನಲ್ಲ' ಎಂದು ಸಿ.ಟಿ.ರವಿ ಹೇಳಿದ್ದಾರೆ.
''ಕ್ಯಾಸಿನೊ ತೆರೆಯುವ ಬಗ್ಗೆ ನೇರವಾಗಿ ನಾನು ಸೂಚಿಸಿಲ್ಲ ಎಂದ ಸಿ.ಟಿ.ರವಿ, ಕ್ಯಾಸಿನೊ ಇರುವ ಕಡೆ ಸ್ಥಳೀಯರಿಗೆ ಅವಕಾಶ ಇರಲ್ಲ, ದುಡ್ಡು ಖರ್ಚು ಮಾಡಲು ಬರುವ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತದೆ, ಇದು ಚರ್ಚೆಯ ವಿಷಯವೆಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ, ನೇರವಾಗಿ ಕ್ಯಾಸಿನೊ ಸ್ಥಾಪಿಸೋಣವೆಂದು ಹೇಳಿಲ್ಲ'' ಎಂದು ಹೇಳಿದ್ದಾರೆ.
'ಮಡಿವಂತಿಕೆ ಇಟ್ಟುಕೊಂಡು ವ್ಯಾಪಾರ ಮಾಡಲಾಗದು, ಮಡಿವಂತಿಕೆ ಎಂದು ಹೇಳುವವರು ಬದುಕಿನಲ್ಲೂ ಅದನ್ನು ಪಾಲಿಸಬೇಕು, ನಡೆಯೊಂದು ರೀತಿ, ಮಾತೊಂದು ರೀತಿ ಇರಬಾರದು' ಎಂದು ಸಿ.ಟಿ.ರವಿ ಹೇಳಿದ್ದಾರೆ.