ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಆಸ್ಪತ್ರೆ ಬಿಲ್ ನೋಡಿ ಹೌಹಾರಿದ ಕುಟುಂಬ..!
ಚಿಕ್ಕಮಗಳೂರು, ಸೆಪ್ಟೆಂಬರ್ 18: ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಖಾಸಗಿ ಆಸ್ಪತ್ರೆ ಬಿಲ್ ನೋಡಿ ಮೃತನ ಕುಟುಂಬಸ್ಥರು ದಂಗಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Recommended Video
ಕೊರೊನಾ ವೈರಸ್ ನಿಂದಾಗಿ ಮೃತಪಟ್ಟ ವ್ಯಕ್ತಿಯ ಖಾಸಗಿ ಆಸ್ಪತ್ರೆ ಬಿಲ್ ಬರೋಬ್ಬರಿ "ಒಂಬತ್ತು ಲಕ್ಷ ಇಪ್ಪತ್ತೈದು ಸಾವಿರದ ಆರು ನೂರಾ ಒಂದು' ರುಪಾಯಿ(9,25,601) ಆಗಿದೆ. ಕೊರೊನಾ ಮತ್ತು ಲಾಕ್ ಡೌನ್ ನಿಂದಾಗಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇದರ ಮಧ್ಯೆ ಖಾಸಗಿ ಆಸ್ಪತ್ರೆಗಳು ಹಣದ ಹಿಂದೆ ಬಿದ್ದಿವೆ.
ಕೊರೊನಾ ಸೋಂಕು ಕಾನಿಸಿಕೊಂಡ ಹಿನ್ನೆಲೆ ಚಿಕ್ಕಮಗಳೂರು ನಗರದ ಆಶ್ರಯ ಖಾಸಗಿ ಆಸ್ಪತ್ರೆಗೆ ಸೇರಿದ್ದ ರೋಗಿಯು ಸಾವನ್ನಪ್ಪಿದ್ದಾನೆ. ಬದುಕುಳಿಯದಿದ್ದರೂ 9 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಿದೆ. ಒಟ್ಟು ಬಿಲ್ ಮೊತ್ತದಲ್ಲಿ 1 ಲಕ್ಷ ರುಪಾಯಿ ವಿನಾಯಿತಿ ನೀಡಿದೆ.
ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆ ಬಿಲ್ ನೋಡಿ ಮೃತರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಶಾಕ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಈ ಖಾಸಗಿ ಆಸ್ಪತ್ರೆಯ ಬಿಲ್ ಗೆ ಸಾರ್ವಜನಿಕರಿಂದಲೂ ಭಾರೀ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೊಡ್ಡ ಮೊತ್ತದ ಬಿಲ್ ನಿಂದ ಕಂಗೆಟ್ಟಿರುವ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆರೋಪಿಸಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.