ಚಿಕ್ಕಮಗಳೂರಿನ ಎತ್ತಿನ ಭುಜದಲ್ಲಿ ಪ್ರವಾಸಿಗರಿಂದ ಶುಲ್ಕ ವಸೂಲಿಗೆ ಸ್ಥಳೀಯರ ವಿರೋಧ
ಚಿಕ್ಕಮಗಳೂರು, ನವೆಂಬರ್ 02: ಮಲೆನಾಡಿನಲ್ಲಿ ಪ್ರಕೃತಿದತ್ತವಾದ ಗುಡ್ಡಬೆಟ್ಟಗಳಿದ್ದು, ಇವುಗಳಿಂದಲೇ ಜಿಲ್ಲೆಯಲ್ಲಿ ಪ್ರವಾಸೋದ್ಯಮ ತಲೆಯೆತ್ತಿದೆ. ಅದರಲ್ಲೂ ಅತಿವೃಷ್ಟಿ ಪ್ರದೇಶದ ಜನರು ಕೃಷಿಯನ್ನು ನಂಬಿಕೊಂಡು ಬದುಕುವುದೇ ಕಷ್ಟವಾಗಿದೆ.
ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮ ಕೊಂಚ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಆದರೆ ಸರ್ಕಾರದ ಕೆಲವೊಂದು ನಿಯಮಗಳಿಂದಾಗಿ ಪ್ರವಾಸಿಗರು ಬರಲು ಹಿಂದೇಟು ಹಾಕುವಂತಾಗಿದ್ದು ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಾನವ ನಿರ್ಮಿತ ಪ್ರೇಕ್ಷಣೀಯ ಸ್ಥಳವನ್ನು ಪ್ರವಾಸಿಗರು ವೀಕ್ಷಿಸಲು ಶುಲ್ಕ ವಿಧಿಸುವುದು ಸಹಜ. ಆದರೆ ತಾಲೂಕಿನ ಊರುಬಗೆ ಗ್ರಾ.ಪಂ. ವ್ಯಾಪ್ತಿಯ ಎತ್ತಿನಭುಜ ಹಾಗೂ ಶಿಶಿಲ ಗುಡ್ಡದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಯಾವುದೇ ಸೌಲಭ್ಯವಿಲ್ಲದಿದ್ದರೂ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ.
ಚಿಕ್ಕಮಗಳೂರು: ಪ್ರವಾಸೋದ್ಯಮ ತಾಣವಾಗಿ ಅಯ್ಯನಕೆರೆ ಅಭಿವೃದ್ಧಿ
ಪ್ರಕೃತಿ ಸೊಬಗನ್ನು ಸವಿಯಲು ಬರುವವರು ಅಲ್ಲಿನ ವಾತಾವರಣ ಶುಚಿಯಾಗಿಡುವಂತೆ ಮತ್ತು ಸ್ವಚ್ಛತೆ ನಿರ್ವಹಣೆಗಾಗಿ ಸ್ಥಳೀಯ ಗ್ರಾ.ಪಂ. ಸ್ವಲ್ಪ ಪ್ರಮಾಣದ ಶುಲ್ಕ ವಿಧಿಸಬೇಕು. ಆದರೆ ಶಿಶಿಲ ಬೆಟ್ಟ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ತಲಾ 250 ರೂ, ವಿದ್ಯಾರ್ಥಿಗಳಿಗೆ ತಲಾ 125 ರೂ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆಯವರು ಈ ಪ್ರವಾಸಿ ಸ್ಥಳವನ್ನು ಅಭಿವೃದ್ಧಿಪಡಿಸದೇ ನೈಸರ್ಗಿಕವಾದ ರಮಣೀಯ ಸ್ಥಳವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ಊರುಬಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಅರಣ್ಯ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಭಾನುವಾರ ಬೈರಾಪುರ ನಾಣ್ಯ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರೇಕ್ಷಣೀಯ ಸ್ಥಳದಲ್ಲಿ ಕನಿಷ್ಠ ಸೌಲಭ್ಯವನ್ನಾದರೂ ಒದಗಿಸಬೇಕು. ಗುಡ್ಡ ವೀಕ್ಷಿಸಲು ಶುಲ್ಕ ಪಡೆಯುವುದನ್ನು ಅರಣ್ಯ ಇಲಾಖೆ ತಕ್ಷಣ ನಿಲ್ಲಿಸಬೇಕು. ಪ್ರೇಕ್ಷಣೀಯ ಸ್ಥಳದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂದು ನವೆಂಬರ್ 1ರಂದು ಪ್ರತಿಭಟನೆ ಮೂಲಕ ಒತ್ತಾಯಿಸಿದರು. ಎಸಿಎಫ್ ಎನ್.ಕೆ.ನಿರ್ಮಲಾ, ವಲಯ ಅರಣ್ಯಾಧಿಕಾರಿ ಮೋಹನ್, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
Recommended Video
ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯೆ ಅಮಿತಾ ಮುತ್ತಪ್ಪ, ಮುಖಂಡರಾದ ಮರಗುಂದ ಪ್ರಸನ್ನ, ನಿಶಾಂತ್ ಪಟೇಲ್, ಸುಮಿತ್ರೇಗೌಡ, ರತನ್ ಊರುಬಗೆ, ಮೇಕನಗದ್ದೆ ಸಂತೋಷ್, ಭರತ್ ಕನ್ನೇಹಳ್ಳಿ, ಸಂಜಯ್ ಕೊಟ್ಟಿಗೆಹಾರ ಮತ್ತಿತರರು ಇದ್ದರು.