ಜಡಗನಹಳ್ಳಿ ಬಳಿ ಚಿರತೆ ದಾಳಿಗೆ ನಾಲ್ಕು ಕುರಿ ಬಲಿ; ಜನರಲ್ಲೂ ಆತಂಕ
ಚಿಕ್ಕಮಗಳೂರು, ಆಗಸ್ಟ್ 5: ನಿನ್ನೆ ಮಧ್ಯರಾತ್ರಿ ಕುರಿಗಳ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ಜಡಗನಹಳ್ಳಿಯ ಶಂಕರದೇವರ ಮಠದ ಬಳಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯಲ್ಲಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಕುರಿಗಳು ಇರುವ ಕಡೆ ಚಿರತೆ ಏಕಾಏಕಿ ಎರಗಿದೆ. ಇದರಿಂದ ಕುರಿಗಳು ಕೂಗಿಕೊಂಡಿವೆ. ಕೂಗು ಕೇಳಿ ಬಂದು ನೋಡಿದ ಕುರಿಗಾಹಿಗಳು ಚಿರತೆ ಕಂಡು ಜೀವ ಭಯದಿಂದ ಓಡಿದ್ದಾರೆ. ಓಡುವಾಗ ಬಿದ್ದು ಅವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.
ಬಂಡೀಪುರದ ಹೆದ್ದಾರಿಯಲ್ಲಿ ರಾಜಗಾಂಭೀರ್ಯ ಮೆರೆದ ಕರಡಿ
ನಾಲ್ಕು ಕುರಿಗಳ ಮೇಲೆ ದಾಳಿ ಮಾಡಿರುವ ಚಿರತೆ, ಮೂರು ಕುರಿಗಳನ್ನು ಕೊಂದು, ರಕ್ತ ಕುಡಿದು ಮತ್ತೊಂದು ಕುರಿಯನ್ನು ಎಳೆದುಕೊಂಡು ಹೋಗಿದೆ. ಸುಮಾರು 70 ಸಾವಿರ ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡಿರುವ ರೈತ, ಪರಿಹಾರ ನೀಡುವಂತೆ ಇಲಾಖೆಗೆ ಆಗ್ರಹಿಸಿದ್ದಾರೆ.
ಕರಡಿ, ಚಿರತೆ ದಾಳಿ ಬಗ್ಗೆ ಈ ಹಿಂದೆಯೇ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಆದರೆ ಇದರೆಡೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.