ಕಣಿವೆಹಳ್ಳಿ ಬಳಿ ಹಳಿ ಮೇಲೆ ಕುಸಿದ ಗುಡ್ಡ: ರೈಲು ಸಂಚಾರ ಬಂದ್
Recommended Video
ಚಿಕ್ಕಮಗಳೂರು, ಆಗಸ್ಟ್ 9: ಮಲೆನಾಡು ಚಿಕ್ಕಮಗಳೂರು ಭಾಗಗಳಲ್ಲಿ ಧಾರಾಕಾರ ಮಳೆ ನಿಂತಿಲ್ಲ. ಅಲ್ಲಲ್ಲಿ ಭೂಕುಸಿತ ಗುಡ್ಡ ಕುಸಿತವಾಗುವುದೂ ನಿಂತಿಲ್ಲ.
ಈ ನಡುವೆಯೇ ಬೆಳಿಗ್ಗಿನ ಜಾವ ಚಿಕ್ಕಮಗಳೂರಿನ ಕಣಿವೆಹಳ್ಳಿ ಸಮೀಪ ರೈಲು ಹಳಿ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿದಿರುವುದರಿಂದ ಈ ಮಾರ್ಗದ ರೈಲು ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಕಣಿವೆಹಳ್ಳಿ ಬಳಿ ಗುಡ್ಡ ಕುಸಿದು, ಭಾರಿ ಪ್ರಮಾಣದ ಕಲ್ಲುಗಳು ಹಳಿ ಮೇಲೆ ಬಿದ್ದಿವೆ.
ಮಳೆಯ ಆರ್ಭಟಕ್ಕೆ ಸಿಲುಕಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಸುತ್ತು
ಹಳಿ ಮೇಲೆ ಗುಡ್ಡ ಕುಸಿತದಿಂದ ಚಿಕ್ಕಮಗಳೂರಿನಿಂದ ಶಿವಮೊಗ್ಗ ರೈಲು ಹಾಗೂ ಚಿಕ್ಕಮಗಳೂರಿನಿಂದ- ಯಶವಂತಪುರ ರೈಲು ಸಂಚಾರ ಸ್ಥಗಿತವಾಗಿದೆ. ಬೆಳಿಗ್ಗೆಯಿಂದಲೇ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಇದರಿಂದ ಪ್ರಯಾಣಿಕರಿಗೆ ಪರದಾಟ ಉಂಟಾಗಿದೆ. ರೈಲನ್ನೇ ಅವಲಂಬಿಸಿದ್ದ ಪ್ರಯಾಣಿಕರು ಬೇರೆ ಮಾರ್ಗವಿಲ್ಲದೇ ತೊಂದರೆ ಅನುಭವಿಸಬೇಕಾಗಿದೆ.
ಹಳಿಗಳ ಮೇಲೆ ದೊಡ್ಡ ಕಲ್ಲುಗಳು ಉರುಳಿರುವುದರಿಂದ ತೆರವು ಕಾರ್ಯಾಚರಣೆಯೂ ಸಮಯ ತೆಗೆದುಕೊಳ್ಳಲಿದೆ. ಜೊತೆಗೆ ಮಳೆಯೂ ಬಿಡದಿರುವುದು ತೆರವಿಗೆ ಅಡ್ಡಿಯಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುಡ್ಡದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯೂ ಆರಂಭಗೊಂಡಿದೆ.