ಚಾರ್ಮಾಡಿ ಘಾಟ್ ನಲ್ಲಿ ಪದೇ ಪದೇ ಗುಡ್ಡ ಕುಸಿತ; ಇನ್ನೆಷ್ಟು ದಿನ ಆಗಬಹುದು ತೆರವಿಗೆ?
ಚಿಕ್ಕಮಗಳೂರು, ಆಗಸ್ಟ್ 8: ಕಾಫಿ ನಾಡಿನಲ್ಲಿ ಮಳೆ ಬಿರುಸುಗೊಂಡಿದೆ. ಹೀಗಾಗಿ ಚಾರ್ಮಾಡಿ ಘಾಟ್ ನಲ್ಲೂ ಮತ್ತೆ ಮತ್ತೆ ಗುಡ್ಡ ಕುಸಿತವಾಗುತ್ತಿದೆ. ಮಂಗಳವಾರವಷ್ಟೇ ಚಾರ್ಮಾಡಿ ಘಾಟ್ ನ ನಾಲ್ಕೈದು ಕಡೆಗಳಲ್ಲಿ ಗುಡ್ಡ ಕುಸಿದು ಬಿದ್ದ ವರದಿಯಾಗಿತ್ತು.
ಜಿಲ್ಲೆಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಮೂಡಿಗೆರೆ ಪಟ್ಟಣದಲ್ಲಿ ಬುಧವಾರ ಯಾವುದೇ ಅಂಗಡಿಗಳು ಬಾಗಿಲು ತೆರೆಯದೇ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಂಗಳವಾರದಿಂದ ಅಲ್ಲಲ್ಲಿ ಗುಡ್ಡ ಕುಸಿಯಲು ಆರಂಭಿಸಿದೆ. ಅದೇ ರಸ್ತೆಗಳಲ್ಲಿ ಬೃಹತ್ ಮರಗಳು ರಸ್ತೆಗುರುಳುತ್ತಿವೆ.
ಧೊಪ್ಪೆಂದು ಬಿದ್ದ ಮನೆ, ಸಾವು ಗೆದ್ದು ಬಂದ ಪುಟ್ಟ ಕಂದ
ಇದುವರೆಗು ಚಾರ್ಮಾಡಿ ಘಾಟ್ ನ ಒಂಬತ್ತು ಕಡೆ ಗುಡ್ಡ ಕುಸಿತವಾಗಿದೆ. ಇಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಪದೇ ಪದೇ ಭೂ ಕುಸಿತ, ಗುಡ್ಡ ಕುಸಿತ ಸಂಭವಿಸುತ್ತಲೇ ಇರುವುದರಿಂದ ಅಲ್ಲಿನ ಮಣ್ಣನ್ನು ತೆರವುಗೊಳಿಸಲೂ ಅವಕಾಶವಾಗುತ್ತಿಲ್ಲ. ತೆರವುಗೊಳಿಸಿದರೂ ಮತ್ತೆ ಮತ್ತೆ ಅದೇ ರಸ್ತೆಯಲ್ಲಿ ಕುಸಿತವಾಗುತ್ತಿದ್ದು, ತೆರವಿನ ಕೆಲಸ ಕ್ಲಿಷ್ಟವಾಗುತ್ತಿದೆ. ಸದ್ಯಕ್ಕೆ ಈ ರಸ್ತೆಯಲ್ಲಿ ಎರಡು ದಿನ ಸಂಚಾರ ನಿಷೇಧಗೊಂಡಿದ್ದು, ಮಳೆ ಮುಂದುವರೆದರೆ ಆ ನಿಷೇಧ ಇನ್ನಷ್ಟು ದಿನ ಮುಂದುವರೆಯುತ್ತದೆ.
ಶಾಸಕ ಎಂಪಿ ಕುಮಾರಸ್ವಾಮಿ ಭೇಟಿ: ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಭೇಟಿ ನೀಡಿ ವೀಕ್ಷಿಸಿದರು. ಕೂಡಲೇ ಸರ್ಕಾರದ ಜೊತೆ ಮಾತನಾಡುವ ಭರವಸೆಯನ್ನೂ ನೀಡಿದರು.