ಕಾಡೆಮ್ಮೆ ಹಾವಳಿಗೆ ಬೇಸತ್ತು ಮತದಾನ ಬಹಿಷ್ಕಾರಕ್ಕೆ ಮುಂದಾದ ಕೊಪ್ಪ ತಾಲೂಕಿನ ಗ್ರಾಮಸ್ಥರು
ಚಿಕ್ಕಮಗಳೂರು, ಮಾರ್ಚ್ 25: ಕೆಲವು ದಿನಗಳ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮರಿತೊಟ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊದಲ ಮನೆಯ ಗ್ರಾಮಸ್ಥರು ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದರು.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಮೊದಲ ಮನೆಯ ಗ್ರಾಮದಲ್ಲಿ 22 ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರು ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು. ಎಷ್ಟೇ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದರು.
ಕಾಫಿನಾಡಲ್ಲಿಯೂ ಕೇಳಿ ಬಂತು ಮತದಾನ ಬಹಿಷ್ಕಾರದ ಕೂಗು
ಇದರ ಬೆನ್ನಲ್ಲೇ ಇದೀಗ ಕಾಡೆಮ್ಮೆ ಹಾವಳಿಗೆ ಬೇಸತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ಕಾಡೆಮ್ಮೆ ಹಾವಳಿಯಿದ್ದು, ಕಳೆದ ತಿಂಗಳು ರೈತ ಮಂಜುನಾಥ್ ಎಂಬುವವರು ಕಾಡೆಮ್ಮೆ ದಾಳಿಗೆ ಮೃತಪಟ್ಟಿದ್ದರು.
ಬೆಳ್ಳಂಬೆಳಗ್ಗೆ ಮನೆ ಅಂಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಕಾಡೆಮ್ಮೆಗಳು, ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ, ಬಾಳೆ ಬೆಳೆ ನಾಶ ಮಾಡುತ್ತಿವೆ. ಕಳೆದ ಒಂದು ವರ್ಷದಿಂದ ಕಾಡೆಮ್ಮೆ ದಾಳಿಗೆ ಹೈರಾಣಾಗಿರುವ ಗುಡ್ಡೇತೋಟ, ಕೌವನಹಳ್ಳಿ, ಚನ್ನೇಕಳ್ಳು, ಬಸಿರಿಕಟ್ಟೆ ಗ್ರಾಮಗಳ ಗ್ರಾಮಸ್ಥರು ಹಗಲು- ರಾತ್ರಿ ಆತಂಕದಲ್ಲೇ ಓಡಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇನ್ನು ಮಕ್ಕಳು ಕಾಡುಕೋಣಗಳಿಗೆ ಹೆದರಿ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರದ ಚಿಂತನೆ ಮಾಡಿದ್ದಾರೆ.