ಸ್ಥಗಿತಗೊಳ್ಳುವ ಭೀತಿಯಲ್ಲಿ ಕೊಪ್ಪದ ಸಹಕಾರ ಸಾರಿಗೆ: ಸಿಎಂ ಆದೇಶಕ್ಕೂ ಬೆಲೆಯಿಲ್ಲ
ಚಿಕ್ಕಮಗಳೂರು, ಫೆಬ್ರವರಿ 16: ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ 30 ವರ್ಷ ಮಲೆನಾಡಿನ ಹಳ್ಳಿಗರ ಮನೆ-ಮನ ಮುಟ್ಟಿದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯು ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿದೆ.
ಒಂದು ಕಾಲದಲ್ಲಿ ಅನಭಿಶಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಅಸಹಕಾರ. ಸಂಬಳ ಕೊಡೋಕು ಆಗದೇ ಮುಚ್ಚುವ ಹೊಸ್ತಿಲಲ್ಲಿದೆ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಉತ್ತರವಿಲ್ಲ. ಏಕೆಂದರೆ..
ಮುಚ್ಚುವ ಹಂತದಲ್ಲಿ ಸಹಕಾರ ಸಾರಿಗೆ ಸಂಸ್ಥೆ:ಕೃಪೆ ತೋರಲಿದೆಯಾ ಸರ್ಕಾರ?
ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಸಾರಿಗೆ ಸಂಸ್ಥೆಗೆ ಅನುದಾನ ನೀಡಲು ಒಪ್ಪಿಗೆ ಕೊಟ್ಟರೂ ಹಣಕಾಸು ಇಲಾಖೆ ಅಧಿಕಾರಿಗಳಿಂದ ತಿರಸ್ಕಾರವಾಗಿದೆ.
ಸಿಎಂ ಯಡಿಯೂರಪ್ಪ ಸಹಿ ಹಾಕಿದ ಫೈಲ್ ಹಣಕಾಸು ಇಲಾಖೆಯಲ್ಲಿ ತಿರಸ್ಕಾರವಾಗಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಕಾರ್ಮಿಕರು ಈಗ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸಂಕಷ್ಟದಲ್ಲಿರುವ ಸಹಕಾರ ಸಾರಿಗೆಯ ಸಹಾಯಕ್ಕೆ ಬಂದ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುದಾನ ನೀಡೋಕೆ ಕಳೆದ ವರ್ಷವೇ ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆದರೆ ಹಣಕಾಸು ಇಲಾಖೆಯಿಂದ ಸಹಕಾರ ಸಾರಿಗೆಗೆ ಅನುದಾನ ನೀಡೋಕೆ ಸಾಧ್ಯವಿಲ್ಲ ಅನ್ನೋ ಉತ್ತರ ಬಂದಿದೆ.
ಒಂದು ವೇಳೆ ಅನುದಾನ ಸಿಗದೇ ಹೋದರೆ 29 ವರ್ಷದ ಟಿಸಿಎಸ್ ಕೊಪ್ಪ ಬಸ್ ಗಳು ರೋಡ್ ಗಿಳಿಯೋದೆ ಕಷ್ಟದ ಸ್ಥಿತಿ ಎಂಬಂತಾಗಿದೆ.
ಚಿಕ್ಕಮಗಳೂರು-ಉಡುಪಿ-ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಚರಿಸುವ ಟಿಸಿಎಸ್ ಕೊಪ್ಪ ಬಸ್ ಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿವೆ.
ಸಹಕಾರ ಸಂಸ್ಥೆ ಈಗ ಸರ್ಕಾರದ ನೀತಿ-ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ-ಟ್ಯಾಕ್ಸ್ ಮಧ್ಯೆ ಸಂಬಳ ನೀಡೋಕು ಆಗ್ದೆ ಬಾಗಿಲು ಹಾಕುವ ಹೊಸ್ತಿಲಲ್ಲಿದೆ. ಸಹಕಾರ ಕೋರಿ ಸರ್ಕಾರದ ಕದ ಬಡಿದ್ರು ಉಪಯೋಗವಿಲ್ಲ.
1990 ರಲ್ಲಿ ಶಂಕರ್ ಟ್ರಾನ್ಸ್ ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಬಾಂಧವ್ಯ ಬೆಸೆದಿತ್ತು.
ತಿಂಗಳಿಗೆ ಡೀಸೆಲ್ ನಿಂದ 24 ಲಕ್ಷ ನಷ್ಟವಾದರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ನ ಹೊರೆ. ಹಾಗಾಗಿ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್ ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡುತ್ತಿತ್ತು, ಆದರೆ ಈಗ ಹಣಕಾಸು ಇಲಾಖೆ ನಡುನೀರಲ್ಲಿ ಕೈಬಿಟ್ಟಿದೆ.