ಚಿಕ್ಕಮಗಳೂರು; ಕರ್ನಾಟಕದ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ
ಚಿಕ್ಕಮಗಳೂರು, ಜೂನ್ 27: ಕರ್ನಾಟಕದ ಮೊದಲ ಸರ್ಕಾರಿ ಗೋ ಶಾಲೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೊಂದು ಗೋ ಶಾಲೆಯನ್ನು ಆರಂಭಿಸುವ ಬಗ್ಗೆ ಘೋಷಣೆ ಮಾಡಿತ್ತು. ಈ ಬಗ್ಗೆ ಬಜೆಟ್ನಲ್ಲಿ ಅನುದಾನ ನೀಡಲಾಗಿತ್ತು. ಎಮ್ಮೆದೊಡ್ಡಿ ಗ್ರಾಮದಲ್ಲಿ 10 ಎಕರೆ ಪ್ರದೇಶದಲ್ಲಿ ಗೋ ಶಾಲೆ ನಿರ್ಮಾಣ ಮಾಡಲಾಗಿದೆ.
53 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋಶಾಲೆ
ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣ ಮಾಡುವ ಈ ಬಾರಿಯ ಬಜೆಟ್ ಘೋಷಣೆಯಂತೆ ತಲೆ ಎತ್ತಿರುವ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಇದಾಗಿದೆ. 53 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಗೋಶಾಲೆಯಲ್ಲಿ ಸುಮಾರು 200ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ನೀಡಬಹುದು. ಸದ್ಯ ಇಲ್ಲಿ ಬೀಡಾಡಿ ಗೋವುಗಳು, ರೈತರಿಗೆ ಸಾಕಲು ಕಷ್ಟವಾಗಿರುವ ಜಾನುವಾರುಗಳು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಸಾಕಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಎಕರೆಯಲ್ಲಿ ಗೋ ಶಾಲೆ, 8 ಎಕರೆಯಲ್ಲಿ ಮೇವು ಬೆಳೆಯಲು ಜಾಗ ಮೀಸಲಿರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 8 ಖಾಸಗಿ ಗೋ ಶಾಲೆ
ಚಿಕ್ಕಮಗಲೂರು ಜಿಲ್ಲೆಯಲ್ಲಿ ಒಟ್ಟು 8 ಖಾಸಗಿ ಗೋ ಶಾಲೆಗಳಿದ್ದು, ಈ ಪೈಕಿ ಕೊಪ್ಪ ತಾಲೂಕಿನಲ್ಲಿ 4, ಚಿಕ್ಕಮಗಳೂರು, ಶೃಂಗೇರಿ, ಕಡೂರು ತಾಲೂಕುಗಳಲ್ಲಿ ತಲಾ ಒಂದು, ಬಾಳೆಹೊನ್ನೂರಿನಲ್ಲಿ ಒಂದು ಗೋ ಶಾಲೆ ಇದೆ. ಇವುಗಳಲ್ಲಿ 1400 ರಾಸುಗಳಿವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ್ ಗೋಶಾಲೆಗಳನ್ನಾಗಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಗೋಶಾಲೆಗಳಲ್ಲಿರುವ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಈ ಮೂಲಕ ಗೋಶಾಲೆಗಳಿಗೆ ಆದಾಯದ ಮೂಲವನ್ನೂ ದಾರಿ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ.
ರಾಸುಗಳ ದತ್ತು ತಗೆದುಕೊಳ್ಳಲು ಅವಕಾಶ
"ಗೋಶಾಲೆ ನಿರ್ಮಾಣದ ಜತೆಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪುಣ್ಯಕೋಟಿ ದತ್ತು ಕಾರ್ಯಕ್ರಮವನ್ನೂ ಜಾರಿಗೆ ತಂದಿದೆ. ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮಾದರಿಯಲ್ಲೇ ಗೋಶಾಲೆಯಲ್ಲಿರುವ ರಾಸುಗಳನ್ನೂ ದತ್ತು ತೆಗೆದುಕೊಳ್ಳಲು ಈ ಕಾರ್ಯಕ್ರಮದಡಿ ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿ 1 ರಾಸುವಿಗೆ ಒಂದು ವರ್ಷಕ್ಕೆ .11 ಸಾವಿರ ನೀಡಬೇಕಾಗಿದೆ. ಪುಣ್ಯಕೋಟಿ ದತ್ತು, ದತ್ತಾಂಶವನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ 7 ಖಾಸಗಿ ಗೋ ಶಾಲೆಗಳ ಮಾಹಿತಿಯನ್ನು ದತ್ತಾಂಶದಲ್ಲಿ ದಾಖಲು ಮಾಡಲಾಗಿದೆ" ಎಂದು ಉಪನಿರ್ದೇಶಕ ಡಾ. ಪ್ರಕಾಶ್ ತಿಳಿಸಿದ್ದಾರೆ.
ಆತ್ಮನಿರ್ಭರ ಗೋಶಾಲೆ!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 7 ಖಾಸಗಿ ಗೋ ಶಾಲೆಗಳಿದ್ದು, ಈ ಪೈಕಿ ಕೊಪ್ಪ ತಾಲೂಕಿನಲ್ಲಿ 4, ಶೃಂಗೇರಿ, ಕಡೂರು ತಾಲೂಕುಗಳಲ್ಲಿ ತಲಾ ಒಂದು, ಬಾಳೆಹೊನ್ನೂರಿನಲ್ಲಿ ಒಂದು ಗೋ ಶಾಲೆ ಇದೆ. ಇವುಗಳಲ್ಲಿ 1139 ರಾಸುಗಳಿವೆ. ಈ ಗೋಶಾಲೆಗಳಿಗೆ ರಾಜ್ಯ ಸರ್ಕಾರ ಪ್ರತಿ ರಾಸುವಿನ ನಿರ್ವಹಣೆಗೆ ಪ್ರತಿದಿನ 17.50 ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ್ ಗೋಶಾಲೆಗಳನ್ನಾಗಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಗೋಶಾಲೆಗಳಲ್ಲಿರುವ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಈ ಮೂಲಕ ಗೋಶಾಲೆಗಳಿಗೆ ಆದಾಯದ ಮೂಲವನ್ನೂ ದಾರಿ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ.