ತರೀಕೆರೆಯಲ್ಲಿ ತಡರಾತ್ರಿವರೆಗೂ ನಡೆದ ರೋಮಾಂಚನಕಾರಿ ಜೋಡೆತ್ತಿನ ಸ್ಪರ್ಧೆ
ಚಿಕ್ಕಮಗಳೂರು, ಫೆಬ್ರುವರಿ 3: ಜಿಲ್ಲೆಯಲ್ಲಿ ಅಂತಘಟ್ಟಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ 8ನೇ ವರ್ಷದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚೌಡೇಶ್ವರಿ ಯುವಕ ಸಂಘದ ವತಿಯಿಂದ ತರೀಕೆರೆ ಪಟ್ಟಣದ ಹೊರ ವಲಯದಲ್ಲಿ ಏರ್ಪಡಿಸಲಾಗಿದ್ದ ರೋಮಾಂಚನಕಾರಿ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 75ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.
ಹಾಸನ, ಮಂಡ್ಯ, ಮೈಸೂರು, ಸಾಲಿಗ್ರಾಮ, ಚಿತ್ರದುರ್ಗ, ತುಮಕೂರು, ದಾವಣಗೆರೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಿಂದಲೂ ಸ್ಪರ್ಧಿಗಳು ಭಾಗಿಯಾಗಿದ್ದರು. ಜೋಡೆತ್ತಿನ ಗಾಡಿ ಓಟಕ್ಕಾಗಿಯೇ ತಯಾರು ಮಾಡಿದ ಎತ್ತುಗಳು ಸ್ಪರ್ಧೆಯಲ್ಲಿ ಓಡುವ ಕೆಚ್ಚನ್ನು ನೋಡಿ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.
ನಿನ್ನೆ ಪ್ರಾರಂಭವಾದ ಜೊಡೆತ್ತಿನ ಗಾಡಿ ಸ್ಪರ್ಧೆಗೆ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಚಾಲನೆ ನೀಡಿದರು. ಸ್ಪರ್ಧೆ ನಿನ್ನೆ ಬೆಳಗಿನ ಜಾವ ಎರಡು ಗಂಟೆಯ ವರೆಗೂ ನಡೆಯಿತು. ನಡುರಾತ್ರಿ ಕಳೆದರೂ ಸುತ್ತಮುತ್ತಲಿನ ಸಾವಿರಾರು ಜನರು ಚಳಿಯನ್ನೂ ಲೆಕ್ಕಿಸದೆ ಅಪ್ಪಟ ಗ್ರಾಮೀಣ ರೈತ ಕ್ರೀಡೆ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯನ್ನು ನೋಡಿದರು.
ಸ್ಪರ್ಧೆಯಲ್ಲಿ ಮಂಡ್ಯದ ಸಾಹುಕಾರ ಜೊಡೆತ್ತುಗಳು ಪ್ರಥಮ ಸ್ಥಾನ ಗಳಿಸಿ 50 ಸಾವಿರ ಬಹುಮಾನ ಪಡೆದುಕೊಂಡರೆ, ಚಿಕ್ಕಮಗಳೂರಿನ ಭೂಮಿಕಾ ಹೆಸರಿನ ಜೊಡೆತ್ತುಗಳು ದ್ವಿತೀಯ ಸ್ಥಾನ ಪಡೆದುಕೊಂಡು 40 ಸಾವಿರ ಬಹುಮಾನ ಗಳಿಸಿಕೊಂಡರು. ಮೂರನೇ ಬಹುಮಾನವನ್ನು ಮಂಡ್ಯದ ಗೌತಮಿ ಜೊಡೆತ್ತು ಪಡೆದುಕೊಂಡು, ನಾಲ್ಕನೇ ಬಹುಮಾನವನ್ನು ಚನ್ನರಾಯಪಟ್ಟಣದ ಜೊಡೆತ್ತುಗಳು ಪಡೆದುಕೊಂಡವು.