ಜೆಡಿಎಸ್ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂದು ಪಣತೊಟ್ಟಿರುವೆ..!
ಚಿಕ್ಕಮಗಳೂರು, ಮೇ.9: 'ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂದು ಪಣತೊಟ್ಟಿದ್ದೇನೆ.' ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
"ನನಗೆ 90 ವರ್ಷ ಆಗಿದೆ ಅಂತ ಯಾರೋ ಹೇಳಿದ್ದಾರೆ. ನನಗೆ ಇನ್ನೂ 90 ವರ್ಷ ಆಗಿಯೇ ಇಲ್ಲ. ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂದು ಪಣ ತೊಟ್ಟಿದ್ದೇನೆ," ಎಂದು ಅವರು ಚಿಕ್ಕಮಗಳೂರಿನಲ್ಲಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೂಕ್ಷ್ಮವಾಗಿ ನಾನು ಗಮನಿಸುತ್ತಿದ್ದೇನೆ. ಒಬ್ಬ ರಾಜಕೀಯ ಮುಖಂಡರಾಗಿ ನಾವು ಎಲ್ಲಿ ದಾರಿ ತಪ್ಪುತ್ತಿದ್ದೇವೆ ಎಂಬ ಆತಂಕ ನನ್ನ ಮನದಲ್ಲಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷ ಆರಂಭಿಸಿರುವ ಜನತಾ ಜಲಧಾರೆ ಚಿಕ್ಕಮಗಳೂರಿಗೆ ತಲುಪಿದೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದೇವೇಗೌಡರು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷಗಳು ಉಳಿಯಲೇಬೇಕು ಆದ್ದರಿಂದ ನನ್ನ ಪ್ರಾಣ ಇರುವವರೆಗೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿವಿಗಾಗಿ ಹೋರಾಡಲಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ನನ್ನ ಮನಸ್ಸಲ್ಲಿ ಒಂದೇ ಆಸೆ ಅದು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನ ಅಧಿಕಾರ ತರುವುದು ಎಂದರು.
ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮಾಜಿ ಶಾಸಕ ವೈ.ಎಸ್.ವಿ ದತ್ತಾ..!
ತೆನೆ ಬಾರ (ಜೆಡಿಎಸ್) ಇಳಿಸಿ ಕಾಂಗ್ರೆಸ್ ಸೇರ್ಪಡೆಯಾಗಲಿದೆ ಎಂದು ಕೇಳಿಬರುತ್ತಿದ್ದ ಕಡೂರು ಮಾಜಿ ಜೆಡಿಎಸ್ ಶಾಸಕ ವೈ.ಎಸ್.ವಿ ದತ್ತ ಅವರು ಇಂದು ಚಿಕ್ಕಮಗಳೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ನಾನಿನ್ನೂ ಜೆಡಿಎಸ್ ನಲ್ಲೇ ಇದ್ದೇನೆ ಕಾಂಗ್ರೆಸ್ ಸೇರುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಳು ಊಹಾಪೋಹ' ಎಂದು ಹೇಳಿದ್ದರು. ಅದರಂತೆ ಇಂದು ಚಿಕ್ಕಮಗಳೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.