ಖಾಸಗಿ ಜಾಗದಲ್ಲಿ ಕೆರೆ ನಿರ್ಮಿಸಿಕೊಟ್ಟ ಸಣ್ಣ ನೀರಾವರಿ ಇಲಾಖೆ ಎಡವಟ್ಟು!
ಚಿಕ್ಕಮಗಳೂರು, ಏಪ್ರಿಲ್ 9: ಸರ್ಕಾರಿ ಅಧಿಕಾರಿಗಳು ಕೊಂಚ ಯಾಮಾರಿದರೂ ಸರ್ಕಾರದ ಕೋಟ್ಯಂತರ ರೂಪಾಯಿ ಕಂಡವರ ಪಾಲಾಗಬಹುದು ಅಥವಾ ಆ ಯೋಜನೆಯೇ ವ್ಯರ್ಥವಾಗಬಹುದು ಎಂಬುದಕ್ಕೆ ಚಿಕ್ಕಮಗಳೂರು ಸಣ್ಣನೀರಾವರಿ ಇಲಾಖೆ ಮಾಡಿದ ಎಡವಟ್ಟು ಸಾಕ್ಷಿಯಾಗಿದೆ. ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಜಾಗದಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸಣ್ಣ ನೀರಾವರಿ ಇಲಾಖೆ ಕೆರೆ ನಿರ್ಮಿಸಿಕೊಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ಲಕ್ಕುಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸರ್ವೇ ನಂಬರ್ 65, 66, 67ರಲ್ಲಿ ಸುಮಾರು 14 ಏಕರೆ ಜಾಗ ಲಕ್ಕುಮ್ಮನಹಳ್ಳಿ ಗ್ರಾಮದ ಶರತ್ s/o ರಾಜಶೇಖರಪ್ಪ ಎಂಬುವರ ಹೆಸರಿನಲ್ಲಿದೆ. ಇಡೀ ಜಾಗ ಕೆರೆಯ ಸ್ವರೂಪದಲ್ಲಿರುವ ಕಾರಣ ಸಣ್ಣ ನೀರಾವರಿ ಇಲಾಖೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡ ಪ್ರಮಾಣದಲ್ಲಿ ಏರಿ ನಿರ್ಮಾಣ ಮಾಡಿ ಕೆರೆಗೆ ಕೋಡಿಯನ್ನೂ ನಿರ್ಮಾಣ ಮಾಡಿದೆ.
ಎಡವಟ್ಟು ಮಾಡಿದ ಅಧಿಕಾರಿಗಳು
ಆದರೆ ಇಷ್ಟೆಲ್ಲ ಕಾಮಗಾರಿ ಮಾಡಿದರೂ ಖಾಸಗಿ ವ್ಯಕ್ತಿಯಿಂದ ಸರ್ಕಾರದ ವಶಕ್ಕೆ ಜಾಗವನ್ನು ಅಧಿಕಾರಿಗಳು ಪಡೆಯದೇ ಎಡವಟ್ಟು ಮಾಡಿದೆ. ಇಂದಿಗೂ ಸರ್ಕಾರ ಕೊಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿದ ಕೆರೆ ಖಾಸಗಿ ವ್ಯಕ್ತಿಯ ಹೆಸರಿನಲ್ಲಿಯೇ ಇರುವುದು ಈಗ ಸಮಸ್ಯೆಯಾಗಿ ಪರಿಣಮಿಸಿದೆ ಕಳೆದ ಕೆಲ ದಿನಗಳ ಹಿಂದೆ ಕೆರೆಯ ಪಕ್ಕದ ಅಜ್ಜನಹಟ್ಟಿ ಗ್ರಾಮದ ರೈತರು ಕೆರೆಯಲ್ಲಿ ಹೂಳು ತುಂಬಿದ್ದ ಮಣ್ಣನ್ನು ತಮ್ಮ ಜಮೀನುಗಳಿಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಲಕ್ಕುಮನಹಳ್ಳಿ ಗ್ರಾಮದ ಶರತ್ ಹಾಗೂ ಕೆಲ ಗ್ರಾಮಸ್ಥರು ಈ ಜಾಗ ನಮಗೆ ಸೇರಿದ್ದು ಹಾಗಾಗಿ ಲಕ್ಕುಮನಹಳ್ಳಿ ಗ್ರಾಮದವರಿಗೆ ಬಿಟ್ಟು ಬೇರೆ ಯಾರೂ ಈ ಕೆರೆಯ ಮಣ್ಣನ್ನು ಎತ್ತಲು ಬಿಡುವುದಿಲ್ಲ ಅಂತಾ ಘೇರಾವ್ ಹಾಕಿದ್ದಾರೆ.
ಚಿಕ್ಕಮಗಳೂರಿಗೆ ಕೊನೆಗೂ ಮೆಡಿಕಲ್ ಕಾಲೇಜು ಅಸ್ತು ಎಂದ ಕೇಂದ್ರ
ಸೂಕ್ತ ದಾಖಲೆಯಿಲ್ಲದೇ ಹೇಗೆ ಕಾಮಗಾರಿ ಕೈಗೊಂಡರು?
ಘೇರಾವ್ ಹಾಕಿದ್ದ ಹಿನ್ನೆಲೆ ಸ್ಥಳೀಯರು ಚಿಕ್ಕಮಗಳೂರು ವಿಭಾಗಾಧಿಕಾರಿ ಡಾ.ಎಚ್ ಎಲ್ ನಾಗರಾಜ್ ಅವರಿಗೆ ದೂರು ನೀಡಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎ ಸಿ ನಾಗರಾಜ್, ಮೇಲ್ನೋಟಕ್ಕೆ ಇದು ಕೆರೆ ಎಂಬುದು ಸಾಬೀತಾಗಿದೆ. ಹಾಗಾಗಿ ಇದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ಸದರಿ ಅವರ ಹೆಸರಿನಲ್ಲಿರುವುದರಿಂದ ಸೂಕ್ತ ಪರಿಹಾರ ನೀಡಬೇಕಾಗುತ್ತದೆ ಎಂದರು. ಅಲ್ಲದೇ ಸಣ್ಣ ನೀರಾವರಿ ಇಲಾಖೆ ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಜಾಗವನ್ನು ಸರ್ಕಾರಕ್ಕೆ ಪಡೆಯದೇ ಕೋಟ್ಯಂತರ ರೂಪಾಯಿ ಕಾಮಗಾರಿ ಮಾಡಿರುವುದು ವಿಪರ್ಯಾಸವಾಗಿದ್ದು, ಸೂಕ್ತ ದಾಖಲೆ ಇಲ್ಲದೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರದ ಹಣದಲ್ಲಿ ಖಾಸಗಿ ಜಾಗಕ್ಕೆ ಈ ರೀತಿಯ ಹಣ ಖರ್ಚು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಗಳ ಕಲಹಕ್ಕೆ ಕಾರಣವಾದ ಸಣ್ಣನೀರಾವರಿ ಇಲಾಖೆ
ಇನ್ನು ಈ ಗ್ರಾಮದಲ್ಲಿ ಅಕ್ಕಮ್ಮನಕೆರೆ ಎಂದು ಕರೆಸಿಕೊಳ್ಳುವ ಈ ಕೆರೆಗೆ ಸರ್ಕಾರದ ಹಲವು ಯೋಜನೆಗಳಲ್ಲಿ ಹಣ ಹಾಕಲಾಗಿದೆ. ಸಣ್ಣ ನೀರಾವರಿ ಇಲಾಖೆ 2007-08 ರಲ್ಲಿ ಈಗಿನ ಸಭಾಪತಿಗಳಾದ ಧರ್ಮೇಗೌಡ ಶಾಸಕರಾಗಿದ್ದ ಸಂದರ್ಭದಲ್ಲಿ ಕೆರೆಗೆ ಕೋಡಿಯನ್ನು ನಿರ್ಮಾಣ ಮಾಡಿ ಏರಿಯನ್ನು ನಿರ್ಮಿಸಿದೆ. ಇನ್ನು ಜಿಲ್ಲಾ ಪಂಚಾಯತ್ ವತಿಯಿಂದ ಈ ಕೆರೆಯ ಅಂಗಳದಲ್ಲಿಯೇ ಬೋರ್ ವೆಲ್ ಕೊರೆಯಲಾಗಿದೆ.
ಚಿಕ್ಕಮಗಳೂರಿನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಿದ ಎಸಿ
ಪರಿಶೀಲನೆ ಮಾಡದೇ ಮಾಡಿದ ತಪ್ಪು
ಆರ್ಟ್ ಲಿವಿಂಗ್ ಸಂಸ್ಥೆ ಕೈಗೊಂಡ ವೇದಾವತಿ ಪುನಶ್ಚೇತನ ಯೋಜನೆಯಡಿಯಲ್ಲಿ ಕೆರೆಯಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಇಷ್ಟೆಲ್ಲಾ ಸರ್ಕಾರಿ ಯೋಜನೆಗಳು ಈ ಕೆರೆಯಲ್ಲಿ ನಡೆದಿದ್ದರೂ ಯಾವುದೇ ಅಧಿಕಾರಿಗಳು ಈ ಜಾಗ ಸರ್ಕಾರದ್ದೋ ಅಥವಾ ಖಾಸಗಿಯವರದ್ದೋ ಎಂಬ ಪರಿಶೀಲನೆ ಮಾಡದೇ ಇರುವುದರಿಂದ ಇಂದು ಸುತ್ತಮುತ್ತಲ ಹಳ್ಳಿಗರ ನಡುವೆ ಕಲಹ ಉಂಟಾಗುತ್ತಿದ್ದು, ಕೂಡಲೇ ಸರ್ಕಾರ ಅಥವಾ ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.