ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಹೆಸರಿನಲ್ಲಿ ಚಿಕ್ಕಮಗಳೂರಿನಲ್ಲಿ ಗ್ರಾಮವೊಂದಿದೆ!
ಚಿಕ್ಕಮಗಳೂರು, ಡಿಸೆಂಬರ್ 29: ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಿಧಿನರಾಗಿರುವ ಸುದ್ದಿ ರಾಜ್ಯದಾದ್ಯಂತ ಶೋಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರ ಜನರಿಗೆ ಮಾತ್ರ ಮಧುಕರ ಶೆಟ್ಟಿ ನಿಧನದ ಸುದ್ದಿ ಭರಸಿಡಿಲಿನಂತೆ ಎರಗಿದೆ. ಆ ಗ್ರಾಮದ ಜನ ಅತೀವ ದುಃಖದಲ್ಲಿದ್ದಾರೆ ಅದಕ್ಕೆ ಕಾರಣವೂ ಇದೆ.
ಅದು 2006 ನೇ ಇಸವಿ. ಅರಣ್ಯ ಭೂಮಿ ಒತ್ತುವರಿ ಆರೋಪದ ಹಿನ್ನೆಲೆ ಸುಮಾರು 32 ಕುಟುಂಬಗಳು ಅಕ್ಷರಸಹಃ ಬೀದಿಗೆ ಬಿದ್ದಿದ್ದರು. ಅತ್ತ ವಾಸಿಸಲು ಮನೆಯಿಲ್ಲದೆ, ಇತ್ತ ಅನ್ನ ಬೆಳೆಯಲು ಭೂಮಿ ಇಲ್ಲದೆ ಕುಟುಂಬಗಳು ಪರದಾಡುವಂತಾಯಿತು. ಇದೇ ಸಂದರ್ಭ ಬಡವರ ಕಣ್ಣೀರು ಒರೆಸಿದ್ದು ಪ್ರಾಮಾಣಿಕ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ. ಮಲೆನಾಡಿನ ಆ ಗ್ರಾಮದ ಜನರಲ್ಲಿ ಅವರ ಹೆಸರು ಇಂದಿಗೂ ಚಿರಸ್ಥಾಯಿ.
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಸಾವಿಗೆ ಗಣ್ಯರ ಕಂಬನಿ
ಹೊಲ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಜನರ ನೋವಿಗೆ ಸ್ಪಂದಿಸಿದ ಅಧಿಕಾರಿ ಮಧುಕರ್ ಶೆಟ್ಟಿ . ಮೂಡಿಗೆರೆಯ ಬೈರಿ ಗದ್ದೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಆರೋಪ ದ ಹಿನ್ನೆಲೆ ಸುಮಾರು 32 ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿತು. ಆ ಸಂದರ್ಭ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಚಿಕ್ಕಮಗಳೂರು ತಾಲೂಕಿನಲ್ಲಿ ಒಂದು ಜಾಗವನ್ನು ಗುರುತಿಸಿ ಒಂದು ಕುಟುಂಬಕ್ಕೆ 2 ಎಕರೆ ಭೂಮಿಯಂತೆ ಮನೆ ಕಟ್ಟಿಕೊಳ್ಳಲು 4 ಗುಂಟೆ ಭೂಮಿ ನೀಡಿದರು. ಪರಿಣಾಮ ಅವರ ಹೆಸರನ್ನು ಇಂದಿಗೂ ಅಜರಾಮರವಾಗುಸಿವಂತೆ ಆ ಗ್ರಾಮಕ್ಕೆ ಗುಪ್ತ ಶೆಟ್ಟಿಹಳ್ಳಿ ಎಂಬ ಹೆಸರನ್ನಿಟ್ಟರು ಆ ಗ್ರಾಮಸ್ಥರು.
ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ
ಪೊಲೀಸರೆಂದರೆ ಭಯಪಡುತ್ತಿದ್ದ ಜನರಿಗೆ ನಾನು ಕೂಡ ಓರ್ವ ಜನಸ್ನೇಹಿ ಅಧಿಕಾರಿ ಎಂಬುದನ್ನು ತೋರಿಸಿದ ಸಹೃದಯಿ. ಗ್ರಾಮಕ್ಕೆ ಬೇಕಾದ ವಿದ್ಯುತ್ ಕುಡಿಯುವ ನೀರು ಒದಗಿಸಿ, ಬದುಕು ಕಟ್ಟಿಕೊಳ್ಳಲು ಮಧುಕರ್ ಶೆಟ್ಟಿ ಆಸರೆಯಾದರು. ಅವರ ನಿಧನ ವಾರ್ತೆ ಎಲ್ಲೆಡೆ ಹಬ್ಬುತ್ತಿದ್ದಂತೆ ತಮಗೆ ಸಹಾಯ ಮಾಡಿದ್ದ ಅಧಿಕಾರಿಯನ್ನು ನೆನೆದು ಇಡೀ ಗ್ರಾಮಸ್ಥರ ಕಣ್ಣಲ್ಲಿ ನೋವು ತುಂಬಿತ್ತು. ಅಗಲಿದ ತಮ್ಮ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ನಾವು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ ಎಂಬ ಸಂದೇಶವನ್ನು ಗ್ರಾಮಸ್ಥರು ರವಾನಿಸಿದರು.