ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾದ ಎಂ.ಕೆ ಪ್ರಾಣೇಶ್ ಪರಿಚಯ
ಚಿಕ್ಕಮಗಳೂರು, ಜನವರಿ 28: ಕಾಫಿಕಣಿವೆ ಚಿಕ್ಕಮಗಳೂರಿನ ತೆಕ್ಕೆಯಲ್ಲಿದ್ದ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನ ಮತ್ತೆ ಮಲೆನಾಡಿಗೆ ಒಲಿದಿದೆ. ಗುರುವಾರ (ಜ.28) ರಂದು ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಅವರು ಉಪ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ನಿರೀಕ್ಷೆಯಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಂ.ಕೆ ಪ್ರಾಣೇಶ್ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಅವಿರೋಧ ಆಯ್ಕೆಯಾದರು. ಜೆಡಿಎಸ್ ಗೆ ಸಭಾಪತಿ ಸ್ಥಾನ ಹಾಗೂ ಉಪ ಸಭಾಪತಿ ಸ್ಥಾನವನ್ನು ಬಿಜೆಪಿ ಬಿಟ್ಟುಕೊಡುವಂತೆ ಉಭಯ ಪಕ್ಷಗಳ ಮುಖಂಡರು ನಿರ್ಧರಿಸಿದ್ದರು.
ಅದರಂತೆ ಉಪ ಸಭಾಪತಿ ಸ್ಥಾನಕ್ಕೆ ಎಂ.ಕೆ ಪ್ರಾಣೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನು ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಕೆ.ಸಿ ಕೊಂಡಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಇಂದಿನಿಂದ ಅಧಿವೇಶನ: ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ
ಕಳೆದ ತಿಂಗಳು ಚಿಕ್ಕಮಗಳೂರು ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ಸಹಕಾರಿ ದುರೀಣ ಎಸ್.ಎಲ್ ಭೋಜೇಗೌಡ ಮರಣದ ನಂತರ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನ ಖಾಲಿಯಾಗಿತ್ತು. ಈಗ ಮತ್ತೆ ಚಿಕ್ಕಮಗಳೂರು ಪಾಲಿಗೆ ಲಭಿಸುವ ಮೂಲಕ ಜನರ ಸಂತಸಕ್ಕೆ ಕಾರಣವಾಗಿದೆ.
ಎಂ.ಕೆ ಪ್ರಾಣೇಶ್ ಪರಿಚಯ
ಎಂ.ಕೆ ಪ್ರಾಣೇಶ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗಟ್ಟದಹಳ್ಳಿ ಗ್ರಾಮದವರು. ನವೆಂಬರ್ 28, 1961 ರಲ್ಲಿ ಎಂ.ಯು.ಕಾಳೇಗೌಡ ಮತ್ತು ರತ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದ ಪ್ರಾಣೇಶ್. ಬಿ.ಎ ಪದವಿ ವ್ಯಾಸಂಗ ಮಾಡಿದ್ದಾರೆ. 1989ರಿಂದ ಬಿಜೆಪಿಯಲ್ಲಿ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಾರೆ.
1989 ರಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದ ಪ್ರಾಣೇಶ್, 1991 ರಿಂದ 1998 ರವರೆಗೆ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1998 ರಿಂದ 2001 ರವರೆಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2000 ರಿಂದ 2005ರವರೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.
2004 ರಿಂದ 2007ರವರೆಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯರಾಗಿ, 2001 ರಿಂದ 2004 ಮತ್ತು 2007ರಿಂದ 2011ರವರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
2010 ರಿಂದ 2013ರ ವರೆಗೆ ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷರಾಗಿದ್ದರು. 2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಈಗ ಉಪ ಸಭಾಪತಿಯಾಗುವ ಅದೃಷ್ಟ ಎಂ.ಕೆ ಪ್ರಾಣೇಶ್ ಅವರನ್ನು ಹುಡುಕಿಕೊಂಡು ಬಂದಿದೆ.
""ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿಗಳಾಗಿ ಆಯ್ಕೆಯಾದ ಶ್ರೀ ಎಂ.ಕೆ ಪ್ರಾಣೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಹಾಗೂ ಸಭಾಧ್ಯಕ್ಷರ ನೇತೃತ್ವದಲ್ಲಿ ಮೇಲ್ಮನೆ ಘನತೆ ನೂರ್ಮಡಿಯಾಗಲಿ'' ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ.