ಚಿಕ್ಕಮಗಳೂರು ಹಬ್ಬಕ್ಕೆ ಅದ್ಧೂರಿ ಚಾಲನೆ
ಚಿಕ್ಕಮಗಳೂರು, ಫೆಬ್ರವರಿ 28: ಜ್ಯೋತಿ ಬೆಳಗಿಸಿ ನಂತರ ಡೋಲು ಬಾರಿಸುವ ಮೂಲಕ ಚಿಕ್ಕಮಗಳೂರು ಹಬ್ಬದ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.
ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಇಂದಿನಿಂದ ಮೂರು ದಿನ ಕಾಲ ಚಿಕ್ಕಮಗಳೂರು ಹಬ್ಬ ನಡೆಯಲಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಚಿಕ್ಕಮಗಳೂರು ಹಬ್ಬವು ಜನತೆಯ ಹಬ್ಬವಾಗಿದ್ದು, ಇದರ ಯಶಸ್ಸು ಪ್ರತಿಯೊಬ್ಬರಿಗೂ ಸಲ್ಲುವಂತಹದ್ದು ಎಂದು ಹೇಳಿದರು.
ನಾನು ಕೂತು ಕಾಲ ಕಳೆಯುವ ಮಂತ್ರಿ ಅಲ್ಲ, ಜಿಲ್ಲೆಗೆ ಕೆಟ್ಟ ಹೆಸರು ತರುವ ಜಾಯಮಾನದವನು ನಾನಲ್ಲ. ಶಕ್ತಿ ಮೀರಿ ಜಿಲ್ಲೆಯ ಅಭಿವೃದ್ದಿಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ರಾಜ್ಯದಲ್ಲಿ ಸುಸಂಸ್ಕೃತವಾದ ಸಾಂಸ್ಕೃತಿಕ ತಂಡವನ್ನು ರಚಿಸುವುದು ನನ್ನ ಹಂಬಲ. ಹಂಪಿ, ಕರಾವಳಿ, ಸಹ್ಯಾದ್ರಿ ಉತ್ಸವದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉತ್ಸವಗಳನ್ನು ಆಚರಿಸಿ ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸುವುದು ನನ್ನ ಧ್ಯೇಯವೆಂದರು.
ನಗರದ ರಸ್ತೆ ಸೇರಿದಂತೆ ಜಿಲ್ಲೆಯ ಎಲ್ಲಾ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ನಿರಾಶ್ರಿತರಿಗೂ ಸೂಕ್ತ ಪರಿಹಾರ ನೀಡುತ್ತೇವೆ. ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಿಸಲು ಮುಂದಿನ ಯುಗಾದಿಯೊಳಗೆ ಚಾಲನೆ ನೀಡುತ್ತೇವೆ ಎಂದು ತಿಳಿಸಿದರು.
ಕೆಮ್ಮಣ್ಣುಗುಂಡಿ ಸೇರಿದಂತೆ ಜಿಲ್ಲೆಯ ಇನ್ನೀತರ ಪ್ರವಾಸಿತಾಣಗಳನ್ನು ಪ್ರಸಿದ್ಧ ಪ್ರವಾಸಿ ತಾಣಗಳನ್ನಾಗಿ ಮಾಡುವುದು, ಅಯ್ಯನಕೆರೆಯಲ್ಲಿ ನಿರಂತರವಾಗಿ ಜಲಸಾಹಸ ಕ್ರೀಡೆ ನಡೆಸಲು ಪ್ರಯತ್ನ ಮಾಡುವ ಉದ್ದೇಶವಿದೆ ಎಂದರು.
ಜನರ ಒತ್ತಾಯದ ಮೇರೆಗೆ ಹಬ್ಬದ ಅಂಗವಾಗಿ ಜಲ ಸಾಹಸ ಕ್ರೀಡೆಗಳನ್ನು ಇನ್ನು ಐದು ದಿನ ಮುಂದುವರಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.