ಚಿಕ್ಕಮಗಳೂರು: ಉಚಿತ ಪಡಿತರದಲ್ಲಿ ಗೋಲ್ ಮಾಲ್
ಚಿಕ್ಕಮಗಳೂರು, ಏಪ್ರಿಲ್ 24: ಕೊರೊನಾ ವೈರಸ್ ಆತಂಕದಿಂದ ದೇಶವೇ ಲಾಕ್ ಡೌನ್ ಆಗಿದ್ದು, ಸರ್ಕಾರ ಮನೆಯಲ್ಲೇ ಇರುವ ಬಡವರಿಗೆ ಕೊಡುತ್ತಿರುವ ಉಚಿತ ಪಡಿತರ ಅಕ್ಕಿಯಲ್ಲೂ ಸೊಸೈಟಿಯವರ ಗೋಲ್ ಮಾಲ್ ಆರೋಪ ಕೇಳಿಬಂದಿದೆ.
ಈ ಆರೋಪಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್, ನಿಡುವಾಳೆ, ಕೂವೆ ಗ್ರಾಮಗಳ ಸೊಸೈಟಿಯಲ್ಲಿ ಅಕ್ರಮ ನಡೆಯುತ್ತಿದ್ದು, ನಿಗಧಿಗಿಂತ ಕಡಿಮೆ ಪಡಿತರ ನೀಡುತ್ತಿದ್ದಾರೆ.
ಎಲ್ಲರಿಂದಲೂ 30 ರಿಂದ 50 ರುಪಾಯಿ ಹಣ ವಸೂಲಿ ಮಾಡುತ್ತಿದ್ದು, ಹಮಾಲಿ ಕೂಲಿ, ಸಾಗಾಣಿಕ ವೆಚ್ಚ, ಲ್ಯಾಪ್ ಟಾಪ್ ಚಾರ್ಜ್, ಅಕ್ಕಿ ತೂಗಿ ಹಾಕುವವನಿಗೆ ಹಾಗೂ ಗೋಣಿಚೀಲದ ಖರ್ಚನ್ನು ಬಡವರ ಮೇಲೆ ಹಾಕುತ್ತಿದ್ದಾರೆ.
ಅತಿ ಬಡವರ ಅಂತ್ಯೋದಯ ಕಾರ್ಡ್ ನಲ್ಲೂ ಅಕ್ರಮ ಮಾಡುತ್ತಿದ್ದಾರೆಂದು ಸ್ಥಳಿಯರು ಆರೋಪಿಸಿದ್ದಾರೆ. ಕೊಡುವ ಅಕ್ಕಿಯಲ್ಲೂ ಕಡಿಮೆ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಿಮಗೆ ಬರುವುದು ಇಷ್ಟೆ ಎಂದು ಹೇಳುತ್ತಿದ್ದಾರಂತೆ.
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳಿಯರು, ಸಚಿವ ಸಿ.ಟಿ ರವಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಸೂಚಿಸಿದ್ದಾರೆ.