ಕಸದ ಬುಟ್ಟಿ ಪಾಲಾಗಿವೆ ಸಂತ್ರಸ್ತರಿಗೆ ಕಳುಹಿಸಿದ್ದ ನೂರಾರು ಚಪಾತಿಗಳು!
ಚಿಕ್ಕಮಗಳೂರು, ಆಗಸ್ಟ್ 21: ಕಳೆದ ವಾರ ಸುರಿದ ಮಳೆಗೆ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಿನ್ನಲು ಅನ್ನವಿಲ್ಲದೆ ಪರದಾಡುವ ಸ್ಥಿತಿ ಅವರದ್ದು. ಅವರ ಕಷ್ಟದ ಸ್ಥಿತಿ ಕಂಡು ರಾಜ್ಯದ ಮೂಲೆ ಮೂಲೆಯಿಂದಲೂ ಸಾಗರೋಪಾದಿಯಲ್ಲಿ ನೆರವಿನ ಹಸ್ತ ನೀಡಲು ಮುಂದೆ ಬರುತ್ತಿದ್ದಾರೆ. ಆದರೆ ಅದ್ಯಾವುದೂ ಅವಶ್ಯಕತೆಯುಳ್ಳವರ ಪಾಲಾಗುತ್ತಿಲ್ಲ ಎಂಬುದಕ್ಕೆ ಇದೇ ಒಂದು ಉದಾಹರಣೆ.
ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ
ಹೌದು. ಚಿಕ್ಕಮಗಳೂರಿನ ಮೂಡಿಗೆರೆಯ ಬಿದರಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರವೊಂದರಲ್ಲಿ ಪ್ರವಾಹ ಸಂತ್ರಸ್ತರ ಹೊಟ್ಟೆ ತುಂಬಿಸಲು ಬಂದಿದ್ದ 400ಕ್ಕೂ ಹೆಚ್ಚು ಚಪಾತಿಗಳು ಕಸದ ಬುಟ್ಟಿಯ ಪಾಲಾಗಿವೆ. ಚಪಾತಿಯ ಪೊಟ್ಟಣವನ್ನು ತೆಗೆಯದೇ ಹಾಗೆಯೇ ಅದನ್ನು ಕಸಕ್ಕೆ ಬಿಸಾಡಲಾಗಿದೆ. ಇದನ್ನು ಸ್ಥಳೀಯ ಸಂಘಟನೆಯ ಯುವಕರು ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇದು ವೈರಲ್ ಆಗಿದೆ.
"ಪ್ರವಾಹದಲ್ಲಿ ಸಿಲುಕಿ ನೊಂದ ಜೀವಗಳಿಗೆಂದು ರಾತ್ರಿ ಹಗಲು ಅದೆಷ್ಟೋ ಜನ ಶ್ರಮಪಟ್ಟು ಕಳುಹಿಸಿದ ಚಪಾತಿಗಳನ್ನು ಇಲ್ಲಿ ತಿನ್ನದೇ ಎಸೆದಿದ್ದಾರೆ. ಅಲ್ಲಿರುವ ಜನರಿಗೆ ಬೇಡದಿದ್ದರೆ ಮತ್ತೊಂದು ಕೇಂದ್ರಕ್ಕೆ ಕಳುಹಿಸಬಹುದಿತ್ತು ಅಥವಾ ಭಿಕ್ಷುಕರಿಗೆ ನೀಡಬಹುದಿತ್ತು. ಹೀಗೆ ಎಸೆದು ಕಳುಹಿಸಿದವರ ಶ್ರಮವನ್ನು ಅವಮಾನಿಸಬಾರದಿತ್ತು. ಹೀಗೆ ಆಹಾರಗಳು ಪೋಲಾಗುತ್ತವೆ ಅನ್ನುವ ಕಾರಣಕ್ಕೆ ಅಗತ್ಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ಹುಡುಕಿ ಕೊಡಿ ಎಂದು ನಾವೂ ಈ ಮೊದಲೇ ಎಚ್ಚರಿಸಿದ್ದೆವು" ಎನ್ನುತ್ತಾರೆ ಪೀಸ್ ಅಂಡ್ ಅವೇರ್ ನೆಸ್ ಟ್ರಸ್ಟ್ ನ ಅಲ್ತಾಫ್ ಬಿಳಗುಳ.