ನಾಲ್ಕು ವರ್ಷ ಕಳೆದರೂ ಸರ್ಕಾರದಿಂದ ನೆರೆ ಪರಿಹಾರ ಇಲ್ಲ: ಮಲೆಮನೆ ಗ್ರಾಮಸ್ಥರು ಕಿಡಿ
ಚಿಕ್ಕಮಗಳೂರು, ಆಗಸ್ಟ್, 08: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ 2019ರಲ್ಲಿ ಭಾರೀ ಮಳೆಯಿಂದಾಗಿ ಅತಿವೃಷ್ಟಿ ಸಂಭವಿಸಿತ್ತು. ಇದರಿಂದ ಜಮೀನು, ಮನೆ ಕಳೆದುಕೊಂಡು ಸಂತ್ರಸ್ಥರಾಗಿದ್ದ ಕುಟುಂಬಗಳಿಗೆ 4ವರ್ಷ ಕಳೆದರೂ ಪರ್ಯಾಯ ಪರಿಹಾರ ಒದಗಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ಬೇಸತ್ತ ಜನರು ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶೀಘ್ರ ಪರಿಹಾರ ನೀಡದಿದ್ದರೆ ಮೂಡಿಗೆರೆ ತಾಲೂಕು ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಗ್ರಾಮದಲ್ಲಿದ್ದ 5 ಕುಟುಂಬಗಳಿಗೆ ಸೇರಿದ್ದ ಮನೆ, ಜಮೀನು ಸಂಪೂರ್ಣವಾಗಿ ಮಣ್ಣು ಪಾಲಾಗಿದ್ದವು. ಸಂಕಷ್ಟಕ್ಕೀಡಾಗಿದ್ದ 5 ಕುಟುಂಬಗಳ ಜನರು ಪಾವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮತ್ತೊಂದೆಡೆ ಮನೆ, ಜಮೀನು ಕಳೆದುಕೊಂಡ ಜನರು ಬೀದಿಪಾಲಾಗಿದ್ದರು. ಸಂತ್ರಸ್ಥರಾದ ಕುಟುಂಬಗಳ ಸದಸ್ಯರು ಆರಂಭದಲ್ಲಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ನಂತರ ಸರ್ಕಾರದ ಭರವಸೆ ಮೇರೆಗೆ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು. ಅತಿವೃಷ್ಟಿ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿಕಾರಿ ಡಾ.ಬಗಾದಿ ಗೌತಮ್ ಸ್ಥಳಕ್ಕೆ ಭೇಟಿ ನೀಡಿ ಜನರ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದರು.
ಬಳಿಕ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿ ಅತಿವೃಷ್ಟಿಯ ಭೀಕರ ದೃಶ್ಯಗಳನ್ನು ಪರಿಶೀಲಿಸಿದ್ದರು. ನಂತರ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದರು. ಆದರೆ ಆಗಸ್ಟ್ ತಿಂಗಳಿಗೆ ನಾಲ್ಕು ವರ್ಷಗಳು ಪೂರ್ಣಗೊಳ್ಳುತ್ತಿದ್ದರೂ, ಸಂತ್ರಸ್ಥ ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರದ ಭರವಸೆ ಮರೀಚಿಕೆಯಾಗಿದೆ. ಮನೆ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ನೀಡಿರುವುದೇ ಸರ್ಕಾರದ ಸಾಧನೆಯಾಗಿದೆ ಎಂದು ಅಲ್ಲಿನ ಜನರು ಅಳಲು ತೋಡಿಕೊಂಡರು.
ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇತ್ತೀಚೆಗೆ ಸಂತ್ರಸ್ಥರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಧಯಾಮರಣಕ್ಕೆ ಅವಕಶ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರು ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸುವ ಭರವಸೆಯನ್ನು ನೀಡಿದ್ದರಿಂದ ಸಂತ್ರಸ್ಥರು ಹೋರಾಟವನ್ನು ಕೈಬಿಟ್ಟಿದ್ದರು. ಆದರೆ ಸರ್ಕಾರ ನೀಡಿದ್ದ ಭರವಸೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಸಂತ್ರಸ್ಥರು ಮತ್ತೆ ಆಕ್ರೋಶಗೊಂಡಿದ್ದು, ಹೋರಾಟಕ್ಕೆ ಮುಂದಾಗಿದ್ದಾರೆ. ಅತೀವೃಷ್ಟಿಯಾಗಿ ಆಗಸ್ಟ್ ತಿಂಗಳಿಗೆ 4 ವರ್ಷ ಪೂರ್ಣಗೊಳ್ಳುತ್ತಿದ್ದು, ಆದರೆ ಬೇಡಿಕೆ ಮಾತ್ರ ಇನ್ನೂ ಈಡೇರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
Recommended Video