ಕಿಚ್ಚ ಕ್ರಿಯೇಷನ್ "ವಾರಸ್ದಾರ" ತಂಡದ ಮೇಲಿನ ಪ್ರಕರಣ ವಜಾ
ಚಿಕ್ಕಮಗಳೂರು, ಫೆಬ್ರವರಿ 15: ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ಮೇಲಿನ ವಿವಾದ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಎಂಬುವವರು ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಹಿಂದೆ ವಾರಸ್ದಾರ ಧಾರಾವಾಹಿ ತಂಡ ನಮ್ಮ ಮನೆಯಲ್ಲಿ ಶೂಟಿಂಗ್ ನಡೆಸುವ ವೇಳೆಯಲ್ಲಿ ನನಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದರು. ಈ ಸಂಬಂಧ ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯ ಸುದೀಪ್ ಗೆ ವಾರೆಂಟ್ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ನಟ ಸುದೀಪ್ ಪರ ವಕೀಲ ಗೋಪಿನಾಥ್ ಹೈ ಕೋರ್ಟ್ ಮೊರೆ ಹೋಗಿದ್ದರು.
ಹೆಂಡತಿ ಶೀಲ ಶಂಕಿಸಿ ಕೊಲೆ ಮಾಡಿದ ಪತಿರಾಯ ಹೇಳಿದ್ದೇನು?
ವಿಚಾರಣೆ ನಡೆಸಿದ ಹೈಕೋರ್ಟ್, ಸುದೀಪ್ ಗೆ ಖುಲಾಸೆ ನೀಡಿ ಪ್ರಕರಣವನ್ನು ವಜಾ ಮಾಡಿ ಆದೇಶ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಸುದೀಪ ಪರ ವಕೀಲ ಗೋಪಿನಾಥ್, ಸುದೀಪ್ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಲಾಗಿತ್ತು. ಅಲ್ಲದೇ ದೀಪಕ್ ಮಯೂರ್ ಪಟೇಲ್, ಬೇರೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಆ ನಷ್ಟವನ್ನು ನಮ್ಮಿಂದ ಭರಿಸಲು ಪ್ರಯತ್ನಿಸಿದರು. ಆದರೆ ಅದು ಸಫಲವಾಗಿಲ್ಲ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದರು.