ಸಚಿವ ರಮೇಶ್ ಜಾರಕಿಹೊಳಿಗೆ ಘೇರಾವ್ ಹಾಕಿದ ಹೆಬ್ಬೂರು ಗ್ರಾಮಸ್ಥರು
ಚಿಕ್ಕಮಗಳೂರು, ಮೇ 12: ಭದ್ರಾ ಮೇಲ್ದಂಡೆ ಯೋಜನೆ ವೀಕ್ಷಣೆಗೆಂದು ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಹೆಬ್ಬೂರಿಗೆ ಬಂದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಇಲ್ಲಿನ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆಯಿತು. ಹೆಬ್ಬೂರು ಗ್ರಾಮಸ್ಥರು ಸಚಿವ ರಮೇಶ್ ಜಾರಕಿಹೊಳಿ ಕಾರು ತಡೆದು ರೈಲ್ವೇ ಅಂಡರ್ ಸೇತುವೆ ಕಾಮಗಾರಿ ಅವ್ಯವಸ್ಥೆ ನೋಡುವಂತೆ ಆಗ್ರಹಿಸಿದರು.
ಹೆಬ್ಬೂರು ಸಮೀಪದ ರೈಲ್ವೆ ಅಂಡರ್ ಪಾಸ್ ನಲ್ಲಿ ಸಮಸ್ಯೆಯಿದ್ದು, ಮಳೆ ಬಂದರೆ ತುಂಬಿಕೊಂಡು ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಆದರೆ ಇದನ್ನು ಗಮನಿಸುವವರೇ ಇಲ್ಲ, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಇದರೆಡೆಗೆ ಗಮನ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿ, ಘೇರಾವ್ ಹಾಕಿದರು.
ಮುಂದಿನ ವರ್ಷ ಎತ್ತಿನಹೊಳೆ ಕಾಮಗಾರಿ ಮೊದಲ ಹಂತಕ್ಕೆ ಚಾಲನೆ
ಇದೇ ಸಮಯ, ಆಕ್ರೋಶಗೊಂಡ ಗ್ರಾಮಸ್ಥರನ್ನು ಒಂದೇ ಮಾತಿನಲ್ಲಿ ರಮೇಶ್ ಜಾರಕಿಹೊಳಿ ಸಮಾಧಾನಪಡಿಸಿದರು. ಕೆಲಸ ಮಾಡಬೇಕಾ? ಫೋಟೋ ತೆಗಿಸಿಕೊಂಡು ಹೋಗಬೇಕಾ ಎಂದು ಹೇಳಿದಾಗ ಜನರೂ ತಣ್ಣಗಾದರು.
ಇದೇ ಸಂದರ್ಭ ಸಾಮಾಜಿಕ ಅಂತರವನ್ನು ಸಚಿವ ರಮೇಶ್ ಜಾರಕಿಹೊಳಿ ಗಾಳಿಗೆ ತೂರಿದರು ಎಂಬ ಆರೋಪ ಕೇಳಿಬಂತು. ಭದ್ರಾ ಮೇಲ್ದಂಡೆ ಯೋಜನೆ ವೀಕ್ಷಣೆ ವೇಳೆ ನೂರಾರು ಜನ ಒಟ್ಟಿಗೆ ಇದ್ದರೂ ಜನರಿಗೆ ಬುದ್ಧಿ ಹೇಳಲಿಲ್ಲ. ಜೊತೆಗೆ ಜನರು ನೂಕುನುಗ್ಗಲಿನಲ್ಲಿ ಹಾರ ತುರಾಯಿ ಹಾಕಿದರೂ ಸುಮ್ಮನಿದ್ದರು ಎಂಬ ಆರೋಪ ಕೇಳಿಬಂತು.