ಚಿಕ್ಕಮಗಳೂರಿನಲ್ಲಿ ಭಾರಿ ಮಳೆ: ಮೂಡಿಗೆರೆ ಶಾಲಾ, ಕಾಲೇಜುಗಳಿಗೆ ರಜೆ
ಚಿಕ್ಕಮಗಳೂರು, ಜುಲೈ 6: ಪಶ್ಚಿಮ ಘಟ್ಟ,ಮಲೆನಾಡು, ಕರಾವಳಿ ಭಾಗಗಳಲ್ಲಿ ಮುಂಗಾರು ಚುರುಕಾಗಿದ್ದು ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಮಡಿಕೇರಿ, ಕೊಡಗಿನಲ್ಲೂ ಮಳೆ ವಿಪರೀತವಾಗಿದೆ.
ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಬೆಚ್ಚಿಬಿದ್ದ ಜಿಲ್ಲಾಡಳಿತ ಮೂಡಿಗೆರೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ. ಶುಕ್ರವಾರವೂ ಕೂಡ ರಜೆ ನೀಡಲಾಗಿತ್ತು. ಶುಕ್ರವಾರ ಒಂದು ದಿನ ಸುರಿದ ಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ರಸ್ತೆ ಕುಸಿದಿದ್ದು, ಜನ ಆತಂಕಗೊಂಡಿದ್ದಾರೆ. ಕಳೆದ ವರ್ಷ ಕರಾಳತೆ ಕಣ್ಣಮುಂದಿದೆ. ಈ ಬಾರಿಯೂ ಜಲಪ್ರಳಯವಾಗುತ್ತಾ ಅನ್ನೋ ಆತಂಕ ಎದುರಾಗಿದೆ.
ಕಟ್ಟೆಮಳವಾಡಿಯಲ್ಲಿ ಸೃಷ್ಟಿಯಾಗಿದೆ ಜಲಲ ಜಲಧಾರೆ...
ಕೊಡಗಿನಲ್ಲಿ ಈ ಬಾರಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಇಷ್ಟು ದಿನದವರೆಗೆ ಮಳೆನೇ ಇರಲಿಲ್ಲ. ಹೀಗಾಗಿ ಮಳೆ ಬರಲಿ ಎಂದು ಹೋಮ-ಹವನವೂ ನಡೆಯಿತು. ಈ ಬೆನ್ನಲ್ಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆ ಇಲ್ಲದೆ ಕಂಗಾಲಾಗಿ ಹೋಗಿದ್ದ ಜನರಿಗೆ ಮತ್ತೆ ಆತಂಕ ಶುರುವಾಗಿದೆ.
ಮಂಜಿನನಗರಿ ಕೊಡಗಿನಲ್ಲಿ ಮಳೆರಾಯನ ಆಗಮನವಾಗಿದೆ. ಮಳೆಯಿಲ್ಲದೇ ಕಂಗಾಲಾಗಿ ಹೋಮ-ಹವನ ಮಾಡಿದ ಮರು ದಿನವೇ ವರುಣದೇವ ಕೃಪೆ ತೋರಿದ್ದಾನೆ. ಶುಕ್ರವಾರ ಬೆಳಗ್ಗೆಯಿಂದ ಮಲೆನಾಡಿನಾದ್ಯಂತ ಧಾರಾಕಾರ ಮಳೆಯಾಗ್ತಿದೆ. ಭಾಗಮಂಡಲದ ತ್ರೀವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.