ಮಲೆನಾಡಿನಲ್ಲಿ ಧಾರಾಕಾರ ಮಳೆ: ಮುಳುಗಡೆ ಭೀತಿಯಲ್ಲಿದೆ ಹೆಬ್ಬಾಳೆ ಸೇತುವೆ
ಚಿಕ್ಕಮಗಳೂರು, ಜು.2: ಕುದುರೆಮುಖ ಸುತ್ತಮುತ್ತ ಇಡೀ ರಾತ್ರಿ ಧಾರಾಕಾರ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಭದ್ರಾ ನದಿ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಲು ನಾಲ್ಕು ಅಡಿಯಷ್ಟೆ ಬಾಕಿಯಿದೆ.
17 ಎಕರೆ ಹುಲ್ಲುಗಾವಲು ಗೋಮಾಳದ ಮೇಲೆ ಸರ್ಕಾರದ ಕಣ್ಣು, ರೈತರ ಆಕ್ರೋಶ
ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ ಕಳಸ-ಹೊರನಾಡು ಸಂಪರ್ಕ ಸೇತುವೆಯಾಗಿ ಹೆಬ್ಬಾಳ ಸೇತುವೆ ಮುಳುಗುವ ಆತಂಕ ಎದುರಾಗಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ ತುಂಗಾ, ಭದ್ರಾ ಮತ್ತು ಭದ್ರಾ ನದಿ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವೂ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದಾರೆ. ಇನ್ನು ಮಲೆನಾಡಿನಲ್ಲಿ ಹೆಚ್ಚು ಮಳೆ ಬೀಳುವ ಕಿಗ್ಗ ಕೆರೆಕಟ್ಟೆ ಕುದುರೆಮುಖ ಕಳಸ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಭಾಗದಲ್ಲೂ ನಿರಂತರ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಮೈದುಂಬಿ ಹರಿಯುತ್ತಿರುವ ಭದ್ರಾ ನದಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೊಪ್ಪ ತಾಲೂಕಿನ ಜಯಪುರದಿಂದ ಬಸರಿಕಟ್ಟೆ ಹೋಗುವ ರಸ್ತೆ ಮಾರ್ಗದಲ್ಲಿ ಮರ ಉರುಳಿ ಬಿದ್ದಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರವೂ ಸ್ಥಗಿತಗೊಂಡಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕಳಸ- ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿಯು ಮೈದುಂಬಿ ಹರಿಯುತ್ತಿರುವುದರಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸಂಭವವಿದೆ.
ಮಳೆ ಮುಂದುವರಿದರೆ ಸೇತುವೆ ಮುಳುಗುವ ಸಾಧ್ಯತೆ
ಹೆಬ್ಬಾಳೆ ಸೇತುವೆ ಮುಳುಗಡೆಯಾಗಲು ನಾಲ್ಕು ಅಡಿ ಬಾಕಿ ಇದ್ದು, ಮಳೆ ಹೀಗೆ ಮುಂದುವರಿದರೆ ಸಂಜೆ ವೇಳೆಗೆ ಮುಳುಗುವ ಸಾಧ್ಯತೆಯಿದೆ. ಕಳೆದ ಮೂರು ವರ್ಷದಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುತ್ತಿದೆ. ಈ ಬಾರಿಯೂ ಮಳೆ ಹೆಚ್ಚಾದರೆ ಮಲೆನಾಡಿಗರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಬಳಿ ಧರೆ ಕುಸಿತವಾಗಿದೆ. ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಚಾರ್ಮಾಡಿ ಘಾಟಿಯಲ್ಲೂ ಭಾರಿ ಮಳೆಯಾಗುತ್ತಿದೆ. ಪ್ರತಿ ಬಾರಿ ಮುಂಗಾರು ಸಂದರ್ಭದಲ್ಲಿ ಭಾರಿ ಗಾಳಿ, ಮಳೆಗೆ ರಸ್ತೆ ಮೇಲೆ ಮರ ಮುರಿದು ಬೀಳುವುದು, ಗುಡ್ಡ ಕುಸಿಯುವುದು, ರಸ್ತೆ ಸಂಚಾರ ಬಂದ್ ಆಗುವುದು ಸಾಮಾನ್ಯವಾಗಿದೆ. ಇದು ಇನ್ನೂ ಹೆಚ್ಚಾದರೆ ಮಲೆನಾಡಿಗರಲ್ಲಿ ಆತಂಕ ಮನೆಮಾಡಲಿದೆ.
Recommended Video