ಚಿಕ್ಕಮಗಳೂರು: ಸೋಮವತಿ ನದಿಯಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವು
ಚಿಕ್ಕಮಗಳೂರು, ಆಗಸ್ಟ್ 09: ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಆರ್ಭಟಕ್ಕೆ 5ನೇ ಬಲಿಯಾಗಿದೆ. ಸೋಮವತಿ ನದಿಯಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಈ ಘಟನೆ ನಡೆದಿದ್ದು, ತರುವೆ ಗ್ರಾಮದ ರತ್ನಮ್ಮ (70) ಮೃತ ದುರ್ದೈವಿಯಾಗಿದ್ದಾರೆ.
ವರ್ಷವಾದರೂ ಇಲ್ಲ ಸೇತುವೆ: ಸಂಸದೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಜನ
ಹಳ್ಳ ದಾಟಿ ಹೋಗುವಾಗ ನೀರಿನ ರಭಸಕ್ಕೆ ರತ್ನಮ್ಮ ಎರಡು ಕಿ.ಮೀ ವರೆಗೂ ದೂರ ಕೊಚ್ಚಿ ಹೋಗಿದ್ದ ಮೃತದೇಹ ಪತ್ತೆಯಾಗಿದೆ. ಕಳೆದ 3 ದಿನಗಳ ಹಿಂದೆ ವೃದ್ಧೆ ಕಾಣೆಯಾಗಿದ್ದರು. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತಗ್ಗು ಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗೃಹೋಪಯೋಗಿ ವಸ್ತುಗಳೆಲ್ಲ ನೀರಿನಲ್ಲಿ ತೇಲಾಡಿವೆ. ಜೊತೆಗೆ ಗಾಳಿಯ ರಭಸವೂ ಹೆಚ್ಚಿದ್ದರಿಂದ ಹಲವು ಮನೆಯ ಮೇಲಿನ ನೀರಿನ ಟ್ಯಾಂಕ್, ಶೀಟ್ ಮತ್ತಿತರ ವಸ್ತುಗಳು ಗಾಳಿಗೆ ಹಾರಿ ಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅವಘಡಗಳನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ತಕ್ಷಣದಿಂದ ಆದೇಶ ಜಾರಿಗೆ ಬರುವಂತೆ ಆಗಸ್ಟ್ 11ರ ಮಧ್ಯ ರಾತ್ರಿವರೆಗೂ ಎಲ್ಲಾ ರೀತಿಯ ಸಂಚಾರವನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದಕ್ಕೆ ಬದಲಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಶಿರಾಡಿ ಘಾಟ್ ಗುಂಡ್ಯಾ ಮೂಲಕ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಡೀ ಜಿಲ್ಲೆಯನ್ನೇ ಅಸ್ತವ್ಯಸ್ತ ಮಾಡಿದೆ. ಪ್ರವಾಹ, ಮಳೆ, ಭೂ ಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿದ್ದು, ಆತಂಕದ ನಡುವೆಯೇ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತೆ ಆಗಿದೆ. ಜೊತೆಗೆ ಅನೇಕ ಸೇತುವೆಗಳೂ ಮುಳುಗಿ ರಸ್ತೆಗಳ ಸಂಪರ್ಕವೇ ಕಡಿತಗೊಂಡಿದೆ.