ಮೈಕೊಡವಿಕೊಳ್ಳುತ್ತಿದ್ದ ಮಲೆನಾಡಿನಲ್ಲಿ ಮತ್ತೆ ಮಳೆ; ಎಲ್ಲೆಲ್ಲಿ ಏನಾಗಿದೆ?
ಚಿಕ್ಕಮಗಳೂರು, ಅಕ್ಟೋಬರ್ 25: ಎರಡು ತಿಂಗಳ ಹಿಂದೆ ಸಂಭವಿಸಿದ ಪ್ರವಾಹದಿಂದ ಈಗಷ್ಟೇ ಮೈಕೊಡವಿಕೊಳ್ಳುತ್ತಿದ್ದ ಮಲೆನಾಡಿನಲ್ಲಿ ಮಳೆ ಮತ್ತೆ ಅವಾಂತರ ಸೃಷ್ಟಿಸುತ್ತಿದೆ. ಹೀಗಾಗಿ ಮಲೆನಾಡಿಗರಲ್ಲಿ ಮತ್ತೆ ಭಯ, ಆತಂಕ ಎದುರಾಗಿದೆ. ನಿನ್ನೆ ರಾತ್ರಿಯಿಂದ ಎಡೆಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯ ಮಳೆಯಿಂದ ಎಲ್ಲೆಲ್ಲಿ ಏನು ಹಾನಿ ಆಗಿದೆ ಎಂಬುದನ್ನು ನೋಡೋಣ...
ಮೂಡಿಗೆರೆ ಬಿಟ್ಟುಹೋಗದ ಮಳೆ
ಮೂಡಿಗೆರೆ ತಾಲೂಕಿನಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರೆದಿದೆ. ಹೇಮಾವತಿ ನದಿಯ ಹರಿವು ಹೆಚ್ಚಾಗಿದ್ದು ಬಂಕೇನಹಳ್ಳಿ ಕಾಲುಸಂಕ ಕೊಚ್ಚಿಹೋಗಿದೆ. ನೂರಾರು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ. ಎರಡು ತಿಂಗಳ ಹಿಂದೆ ಹೇಮಾವತಿ ಉಕ್ಕಿ ಹರಿದಾಗ ಈ ಕಾಲುಸಂಕ ಕೊಚ್ಚಿಹೋಗಿತ್ತು. ನಂತರ ಸ್ಥಳೀಯರೇ ಕಾಲುಸಂಕ ನಿರ್ಮಾಣ ಮಾಡಿಕೊಂಡಿದ್ದರು. ಈಗ ಮತ್ತೆ ಕೊಚ್ಚಿಹೋಗಿದೆ. ಹೀಗಾಗಿ ಗ್ರಾಮಸ್ಥರು ಮತ್ತೆ ಸಂಪರ್ಕ ಕಳೆದುಕೊಂಡಿದ್ದಾರೆ. ಇನ್ನು ಜಾವಳಿ ಗ್ರಾಮದಲ್ಲಿ ಶಿಕ್ಷಕಿ ತಾರಾ ಎಂಬುವರ ಮನೆಯ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದಿದ್ದು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಗಾಳಿಯಿಂದ ಕೊಟ್ಟಿಗೆಹಾರದಲ್ಲಿ ರಾಮಚಂದ್ರ, ಅತ್ತಿಗೆರೆ ಅಶ್ವತ್ ಎಂಬುವರ ಮನೆಗಳಿಗೆ ತೀವ್ರಹಾನಿ ಉಂಟಾಗಿದೆ.
ರಾಜ್ಯದಲ್ಲಿ ಅಬ್ಬರಿಸಲಿದೆ 'ಕ್ಯಾರ್' ಚಂಡಮಾರುತ
ಎಸ್ಟೇಟ್ ನಲ್ಲಿ ಉರುಳಿ ಬಿದ್ದ ಮರ
ಕೊಪ್ಪ ತಾಲೂಕಿನ ಬಾಕಲೆಖಾನ್ ಎಸ್ಟೇಟ್ ನಲ್ಲಿ ಬೃಹತ್ ಮರ ಧರೆಗೆ ಉರುಳಿದ್ದು ಮರದ ಕೆಳಗೆ ಇದ್ದ ಹಸು ಸಾವನ್ನಪ್ಪಿದೆ. ಮೂಡಿಗೆರೆ ತಾಲೂಕಿನ ಮಹಲ್ಗೊಡು ಬಳಿ ಭದ್ರಾ ನದಿಗೆ ಸೇರುವ ಹಳ್ಳ ತುಂಬಿ ಹರಿಯುತ್ತಿದ್ದು, ಮಹಲ್ಗೋಡು ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದ್ದು ಕಳಸಾ-ಮಾಗುಂಡಿ-ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದೆ.
ಚಾರ್ಮಾಡಿ ಭಾಗದಲ್ಲಿಯೂ ಭಾರೀ ಮಳೆ
ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿಗೆ ಒಳಗಾಗಿದ್ದ ಚಾರ್ಮಾಡಿ ಭಾಗದಲ್ಲಿಯೂ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇವಲ ಲಘುವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಎರಡು ತಿಂಗಳ ಹಿಂದೆ ಮಳೆಯಾಗಿದ್ದಾಗ, ಚಾರ್ಮಾಡಿಯಲ್ಲಿ ಓಡಾಟ ನಿಷೇಧಿಸಲಾಗಿತ್ತು. ನಿನ್ನೆ ರಾತ್ರಿಯಿಂದ ಸಾಕಷ್ಟು ಮಳೆಯಾಗುತ್ತಿದ್ದು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ಯಾರ್ ಚಂಡಮಾರುತ; ಅಸ್ತವ್ಯಸ್ತಗೊಂಡ ಮಂಗಳೂರು, ಉಡುಪಿ
ಬಯಲು ಸೀಮೆಯಲ್ಲೂ ತಪ್ಪಿಲ್ಲ ಆಪತ್ತು
ಮಲೆನಾಡಿನ ಬಯಲು ಸೀಮೆ ಭಾಗವಾದ ಕಡೂರು, ತರೀಕೆರೆ ತಾಲೂಕಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನಿನ್ನೆ ಕಡೂರು ತಾಲೂಕಿನ ಮಲ್ಲದೇವಿಹಳ್ಳಿ ಸಮೀಪದ ವೇದಾವತಿ ನದಿಯ ಕುಂತಿಹೊಳೆಯಲ್ಲಿ ಕರಿಯಮ್ಮ ಎಂಬುವರು ಕೊಚ್ಚಿಹೋಗಿದ್ದರು. ಜೊತೆಗೆ ನೂರಾರು ಎಕರೆ ಜೋಳ, ರಾಗಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡಿದ್ದು ರೈತರು ಕಂಗಾಲಾಗಿದ್ದಾರೆ.