ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆರಾಯ; ಎಲ್ಲೆಲ್ಲಿ ಏನಾಗಿದೆ?
ಚಿಕ್ಕಮಗಳೂರು, ಆಗಸ್ಟ್ 06: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಬಿರುಸು ಮಳೆಯಿಂದಾಗಿ ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಿದೆ.
Recommended Video
ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ-ಗಾಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಅವಾಂತರಗಳೂ ಸೃಷ್ಟಿಯಾಗಿವೆ. ಶೃಂಗೇರಿ ತಾಲೂಕಿನ ಸಂಕ್ಲಾಪುರದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಮನೆ ಸಂಪೂರ್ಣ ನಾಶವಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿಯ ವಿವರ ಇಲ್ಲಿದೆ...
ಚಿತ್ರಗಳಲ್ಲಿ; ಮಲೆನಾಡು ಚಿಕ್ಕಮಗಳೂರಿನಲ್ಲಿ ಅವಾಂತರ ಸೃಷ್ಟಿಸಿರುವ ಆಶ್ಲೇಷ ಮಳೆ
ಭಾರಿ ಮಳೆಗೆ ಕುಸಿಯುತ್ತಿರುವ ರಾಜ್ಯ ಹೆದ್ದಾರಿ
ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ರಾಜ್ಯ ಹೆದ್ದಾರಿ 17ರ ಬಾಳೆಹೊನ್ನೂರು ಜಲದುರ್ಗ ಬಳಿ ಭೂಕುಸಿತವಾಗುತ್ತಿದೆ. ನೋಡ ನೋಡುತ್ತಿದ್ದಂತೆ ರಸ್ತೆ ಕುಸಿಯುತ್ತಿದೆ. ಹೀಗಾಗಿ ಬಾಳೆಹೊನ್ನೂರು-ಕೊಪ್ಪ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. ಸದ್ಯಕ್ಕೆ ಕೊಪ್ಪ, ಶೃಂಗೇರಿ, ಎನ್ಆರ್ ಪುರ ಭಾಗದ ಬಹುತೇಕ ರಸ್ತೆಗಳು ಬಂದ್ ಆಗಿವೆ.
ಕಳೆದ ಬಾರಿ ಗುಡ್ಡ ಕುಸಿತವಾಗಿದ್ದ ಸ್ಥಳದಲ್ಲಿ ಮತ್ತೆ ಕುಸಿತ
ಭಾರೀ ಮಳೆಯಿಂದಾಗಿ ಜಿಲ್ಲೆಯ ಕಳಸ ಸಮೀಪದ ಚನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿತವಾಗಿದ್ದು, ಕಳೆದ ಬಾರಿಯೂ ಇದೇ ಜಾಗದಲ್ಲಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿತದಿಂದಾಗಿ ಗ್ರಾಮದ ಸಂಪರ್ಕಗಳು ಕಡಿತವಾಗಿವೆ.
ಶೃಂಗೇರಿ, ಕೊಪ್ಪದಲ್ಲಿ ಭಾರೀ ಮಳೆ
ಜಿಲ್ಲೆಯ ಶೃಂಗೇರಿ, ಕೊಪ್ಪದಲ್ಲಿ ಮಳೆ-ಗಾಳಿ ಹೆಚ್ಚಿದ್ದು, ಮರಗಳು ನೆಲಕ್ಕೆ ಉರುಳುತ್ತಿವೆ. ಭಾರೀ ಮಳೆಗೆ ಬೃಹತ್ ಗಾತ್ರದ ಮರಗಳು ಉರುಳಿ ಬೀಳುತ್ತಿವೆ. ಹೀಗಾಗಿ ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಕೊಪ್ಪ ಶೃಂಗೇರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಧಿಕಾರಿಗಳು, ಸ್ಥಳೀಯರು ಮರ ತೆರವು ಕಾರ್ಯ ಮಾಡಿದರು.
ಕಳಸ-ಹೊರನಾಡು ಸಂಪರ್ಕ ಕಡಿತ
ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ರಾತ್ರಿಯೇ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಸುಮಾರು ಮೂರು ಅಡಿ ನೀರು ಹರಿಯುತ್ತಿದೆ. ಗಂಟೆ ಗಂಟೆಗೂ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಸೇತುವೆ ಮುಳುಗಡೆಯಿಂದ ನಿನ್ನೆಯಿಂದ ಕಳಸ - ಹೊರನಾಡು ಸಂಪರ್ಕ ಕಡಿತವಾಗಿದೆ.
ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಭಾರೀ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ತೋಟದಿಂದ ಹಿಂದಿರುಗುವಾಗ ವಿದ್ಯುತ್ ತಂತಿ ತುಳಿದು ರೈತ ಪರಮೇಶ್ವರಪ್ಪ (38) ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.