ಪಶ್ಚಿಮಘಟ್ಟದಲ್ಲಿ ಭಾರಿ ಮಳೆ, ದತ್ತಪೀಠ ರಸ್ತೆ ಕುಸಿತ; ವಾಹನ ಸವಾರರು ಆತಂಕದಲ್ಲೇ ಸಂಚಾರ
ಚಿಕ್ಕಮಗಳೂರು, ಜೂ 14: ಕಾಫಿನಾಡಲ್ಲಿ ಇನ್ನು ಪೂರ್ಣ ಪ್ರಮಾಣದಲ್ಲಿ ಮಳೆಗಾಲ ಆರಂಭವೇ ಆಗಿಲ್ಲ. ಈಗಲೇ, ಆಗಾಗ್ಗೆ-ಅಲ್ಲಲ್ಲೇ ಸುರಿಯುವ ಮಳೆಗೆ ರಸ್ತೆಗಳು ಕುಸಿಯುತ್ತಿದ್ದು ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಸುರಿದ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ ಅರ್ಧ ರಸ್ತೆಯೇ ಕುಸಿದು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತಪೀಠದ ಮಾರ್ಗದಲ್ಲಿ ರಸ್ತೆ ಕುಸಿತವಾಗಿದ್ದು ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ.
ಮಳೆ ಮುಂದುವರೆದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ. ದಿನನಿತ್ಯ ದತ್ತಾತ್ರೇಯ ಪೀಠಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸದ್ಯ ಕುಸಿದ ರಸ್ತೆಯಲ್ಲೇ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತಿವೆ. ಮೊದಲ ಮಳೆಗೆ ಚಂದ್ರದೋಣ ಪರ್ವತ ಪ್ರದೇಶದ ರಸ್ತೆ ಕುಸಿತಗೊಂಡಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆ
ದತ್ತಪೀಠಕ್ಕೆ ಇದೊಂದೇ ಮಾರ್ಗ
ಕಳೆದ ಎರಡ್ಮೂರು ದಿನಗಳಿಂದ ಮುಳ್ಳಯ್ಯನಗಿರಿ, ದತ್ತಪೀಠದ ಸುತ್ತಮುತ್ತ ಸುರಿದ ಭಾರೀ ಮಳೆಯಿಂದ ದತ್ತಪೀಠದ ಮುಖ್ಯರಸ್ತೆಯೇ ಅರ್ಧಕ್ಕೆ ಕಟ್ ಆಗಿ ಬಿದ್ದಿದೆ. ಸುಮಾರು 40-50 ಅಡಿ ರಸ್ತೆಯ ಕೆಳಭಾಗದ ಮಣ್ಣು ಸಂಪೂರ್ಣ ಕಳಚಿ ಬಿದ್ದಿದ್ದು ಮತ್ತೆ ದುರಸ್ತಿ ಕಷ್ಟಸಾಧ್ಯ ಎಂಬಂತಹಾ ಸ್ಥಿತಿಯಲ್ಲಿದೆ. ರಸ್ತೆ ಕಟ್ ಆಗಿರುವ ಬದಿಯ ಕೆಳಭಾಗದಲ್ಲಿ ಸಾವಿರಾರು ಅಡಿ ಪ್ರಪಾತವಿದೆ. ಅಲ್ಲಿಗೆ ಹೋಗಿ ಜೆಸಿಬಿಯಲ್ಲಿ ಕೆಲಸ ಮಾಡೋದು ಕೂಡ ಕಷ್ಟ. ಭೂಮಿಯ ಕೆಳಭಾಗದಿಂದ ಬಂದೋಬಸ್ತ್ ಮಾಡಿ ರಸ್ತೆ ದುರಸ್ತಿ ಮಾಡುವುದನ್ನ ಅಸಾಧ್ಯ ಎಂದೇ ಹೇಳಬಹುದು. ಆ ಮಟ್ಟಕ್ಕೆ ರಸ್ತೆ ಕಟ್ ಆಗಿ ಬಿದ್ದಿದೆ. ದತ್ತಪೀಠಕ್ಕೆ ಇರೋದು ಇದೊಂದೇ ಮಾರ್ಗ. ಈ ಮಾರ್ಗ ಬಿಟ್ಟಿರೆ ಬೇರೆ ಯಾವುದೇ ದಾರಿ ಇಲ್ಲ. ನಿತ್ಯ ರಾಜ್ಯ ಹಾಗೂ ಹೊರರಾಜ್ಯದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ರಸ್ತೆಯ ಕೆಳಭಾಗದಲ್ಲಿ ಮಣ್ಣು ಉದುರುವುದು ಇನ್ನೂ ನಿಂತಿಲ್ಲ. ಕೂಡಲೇ ಸರ್ಕಾರ ಈ ರಸ್ತೆಯ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಬಹುಶಃ ಈ ರಸ್ತೆ ಸಂಪೂರ್ಣ ಕಟ್ ಆಗಿ ಬಿದ್ದರೂ ಆಶ್ಚರ್ಯವಿಲ್ಲ. ಆದ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ದತ್ತಪೀಠಕ್ಕೆ ರಸ್ತೆಯೇ ಇರೋದಿಲ್ಲ.
ಎರಡ್ಮೂರು ವರ್ಷಗಳಿಂದ ಮಳೆಗೆ ಭೂಮಿಯ ತೇವಾಂಶ ಹೆಚ್ಚಳ
ದತ್ತಪೀಠಕ್ಕೆ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ಬರುತ್ತಾರೆ. ವೀಕ್ಎಂಡ್ನಲ್ಲಿ ಸಾವಿರಾರು. ಅವರಲ್ಲಿ ಕೇರಳ, ಆಂಧ್ರ, ತಮಿಳುನಾಡಿ ಗಾಡಿಗಳೇ ಹೆಚ್ಚು. ಈಗ ಕುಸಿದಿರುವ ಜಾಗ ಹೋಗಿ-ಬರುವ ಎರಡೂ ಮಾರ್ಗದಲ್ಲೂ ಟರ್ನ್ ಇರುವಂತದ್ದು. ಹಾಗಾಗಿ, ಹೋಗಿ-ಬರುವ ವಾಹನಗಳು ಟರ್ನ್ನಲ್ಲಿ ಹಾರನ್ ಮಾಡಿಕೊಂಡು ವೇಗವಾಗಿ ಬಂದರೆ ಅಪಾಯ ಕಟ್ಟಿಟ್ಟಬುತ್ತಿ. ಗಾಡಿ ಟರ್ನ್ ಆಗಿ ಹತ್ತಿರ ಬರುವವರೆಗೂ ರಸ್ತೆ ಕುಸಿದಿರುವುದು ಗೊತ್ತಾಗಲ್ಲ. ಅಷ್ಟೆ ಅಲ್ಲದೆ, ಹೊರಜಿಲ್ಲೆ-ರಾಜ್ಯದ ಪ್ರವಾಸಿಗರಿಗೆ ಈ ಮಾರ್ಗದ ಪರಿಚಯ ಇರುವುದಿಲ್ಲ. ಏನಾದರೂ ಅನಾಹುತವಾದರೆ ಪರಿಣಾಮ ದೊಡ್ಡದ್ದಾಗಿರುತ್ತೆ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ರಸ್ತೆಯ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಬಹಳಷ್ಟಿದೆ. ಅಷ್ಟೆ ಅಲ್ಲದೆ, ಜಿಲ್ಲೆಯಲ್ಲಿ ಇನ್ನೂ ಪೂರ್ಣಪ್ರಮಾಣದ ಮಳೆಗಾಲವೇ ಆರಂಭವಾಗಿಲ್ಲ. ಆಗಾಗ್ಗೆ ಸುರಿಯುವ ಸಾಧಾರಣ ಮಳೆಗೆ ರಸ್ತೆ ಕಟ್ ಆಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಎರಡ್ಮೂರು ವರ್ಷಗಳಿಂದ ಭಾರೀ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದೆ. ಈ ಮಳೆಗಾಲದಲ್ಲಿ ಇನ್ನು ಯಾವ-ಯಾವ ಅನಾಹುತ ಸಂಭವಿಸುತ್ತೋ ಎಂದು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.
ಮುಂಗಾರು ಮಳೆ; ಚಿಕ್ಕಮಗಳೂರಲ್ಲಿ ಹೈ ಅಲರ್ಟ್
ಪ್ರವಾಸಿತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಕೋವಿಡ್ ಹೊಡೆತಕ್ಕೆ ನೆಲಕಚ್ಚಿದ ಪ್ರವಾಸೋದ್ಯಮ ಇದೀಗ ಚೇತರಿಕೆಯ ಹಾದಿ ಹಿಡಿಯುತ್ತಿದೆ. ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿತಾಣಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಪ್ರವಾಸಿ ತಾಣಗಳು ವಾರಾಂತ್ಯದಲ್ಲಿ ಜನಜಂಗುಳಿಯಿಂದ ತುಂಬಿರುತ್ತವೆ. ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುತ್ತಿರುವ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರಾ, ಕೆಮ್ಮಣ್ಣುಗುಂಡಿ, ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಜಲಪಾತಗಳಾದ ಕಲ್ಲತ್ತಗಿರಿ, ಹೆಬ್ಬೆ, ಸಿರಿಮನೆ ಫಾಲ ಸೌಂದರ್ಯ ಸವಿಯಲು ಜನಜಂಗುಳಿ ಅಡಿ ಇಡುತ್ತಿದೆ.
Recommended Video
ಈ ಮಾರ್ಗ ಬಿಟ್ಟರೆ ಬೇರೆ ದಾರಿ ಇಲ್ಲ
ಆ ಮಟ್ಟಕ್ಕೆ ರಸ್ತೆ ಕಟ್ ಆಗಿ ಬಿದ್ದಿದೆ. ದತ್ತಪೀಠಕ್ಕೆ ಇರೋದು ಇದೊಂದೇ ಮಾರ್ಗ. ಈ ಮಾರ್ಗ ಬಿಟ್ಟಿರೆ ಬೇರೆ ಯಾವುದೇ ದಾರಿ ಇಲ್ಲ. ನಿತ್ಯ ರಾಜ್ಯ ಹಾಗೂ ಹೊರರಾಜ್ಯದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ರಸ್ತೆಯ ಕೆಳಭಾಗದಲ್ಲಿ ಮಣ್ಣು ಉದುರುವುದು ಇನ್ನೂ ನಿಂತಿಲ್ಲ.
ಒಟ್ಟಾರೆ, ಈ ವರ್ಷವೂ ಹೆಚ್ಚು ಮಳೆ ಇದೆ ಎಂದು ಈಗಾಗಲೇ ಜಿಲ್ಲಾಡಳಿತ ಜಿಪಿಆರ್ಎಸ್, ಸೆಟಲೈಟ್ ಹಾಗೂ ಜಿಲ್ಲಾಡಳಿತದ ವತಿಯಿಂದ ಈಗಾಗಳೇ ಅಪಾಯದ ಗ್ರಾಮ, ಅಪಾಯದ ಸ್ಥಳಗಳನ್ನ ಗುರುತಿಸಲಾಗಿದೆ. 108 ಅಪಾಯದ ಸ್ಥಳವನ್ನ ಗುರಿತಿಸಿರೋ ಜಿಲ್ಲಾಡಳಿತ ಮಳೆಗಾಲವನ್ನ ಫೇಸ್ ಮಾಡೋದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ, ಪೂರ್ಣ ಪ್ರಮಾಣದ ಮಳೆಗಾಲ ಆರಂಭವಾಗುವ ಮುನ್ನವೇ ಸಾಧಾರಣ ಮಳೆಗೆ ರಸ್ತೆಗಳು ಕುಸಿಯುತ್ತಿರುವುದ ಕಂಡು ಜಿಲ್ಲೆಯ ಜನ ಈ ವರ್ಷದ ಮಳೆಗಾಲ ಹೇಗಿರುತ್ತೋ ಎಂದು ಚಿಂತಾಕ್ರಾಂತರಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)