ಚಿಕ್ಕಮಗಳೂರಿನ ಆರೋಗ್ಯ ಇಲಾಖೆ ಯಡವಟ್ಟು; ಗರ್ಭಿಣಿಗೂ ಇಲ್ಲ ಸೋಂಕು
ಚಿಕ್ಕಮಗಳೂರು, ಮೇ 28: ಚಿಕ್ಕಮಗಳೂರಿನಲ್ಲಿ ಆರೋಗ್ಯ ಇಲಾಖೆ ಮಹಾ ಯಡವಟ್ಟನ್ನೇ ಮಾಡಿದೆ. ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರಿನಲ್ಲಿ ಕೊರೊನಾ ವೈರಸ್ ಆತಂಕ ಹುಟ್ಟಿಸಿದ್ದ ವರದಿಗಳನ್ನೇ ಈಗ ಅನುಮಾನದಿಂದ ನೋಡುವಂತೆ ಆಗಿದೆ.
ಕೆಲವೇ ದಿನಗಳ ಹಿಂದೆ ವೈದ್ಯ ಹಾಗೂ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದಾಗಿ ಚಿಕ್ಕಮಗಳೂರಿನ ಆರೋಗ್ಯ ಇಲಾಖೆ ತಿಳಿಸಿತ್ತು. ಆ ನಂತರ ವೈದ್ಯನಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿತ್ತು. ಇದೀಗ ಆ ಗರ್ಭಿಣಿಯ ವರದಿಯೂ ನೆಗೆಟಿವ್ ಬಂದಿದೆ. ಈ ರೀತಿ ವರದಿ ನೀಡಿ ಜಿಲ್ಲೆಯಲ್ಲಿ ಅನವಶ್ಯಕವಾಗಿ ಗೊಂದಲ ಮೂಡಿಸಲಾಗುತ್ತಿದೆ, ಜನರ ಜೀವದ ಜೊತೆ ಏಕೆ ಆರೋಗ್ಯ ಇಲಾಖೆ ಹುಡುಗಾಟವಾಡುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಚಿಕ್ಕಮಗಳೂರಲ್ಲಿ ಮತ್ತೆ ಮೂವರಿಗೆ ಕೊರೊನಾ ವೈರಸ್ ಸೋಂಕು
ಜಿಲ್ಲೆಯಲ್ಲಿ ಕಂಡುಬಂದ ಮೊದಲ ಪ್ರಕರಣಗಳು
ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರಿನಲ್ಲಿ ಮೂಡಿಗೆರೆಯ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಸೋಂಕು ಇದೆ ಎಂದು ಮೊದಲು ತಿಳಿದುಬಂದಿತ್ತು. ಆನಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ಶುರುವಾಗಿತ್ತು.
ವೈದ್ಯನ ಸಂಪರ್ಕಿತರಿಗೆಲ್ಲಾ ಕ್ವಾರಂಟೈನ್
ವೈದ್ಯನಿಗೆ ಕೊರೊನಾ ಸೋಂಕು ಇದೆ ಎಂದು ತಿಳಿಯುತ್ತಿದ್ದಂತೆ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು ನಾಲ್ಕುನೂರು ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ವೈದ್ಯರು ಓಡಾಡಿದ್ದ, ಸಂಪರ್ಕಿಸಿದ್ದ ಮಾಹಿತಿಯನ್ನೂ ಕಲೆ ಹಾಕಲಾಗಿತ್ತು. ಆ ನಂತರ ಜಿಲ್ಲೆಯಲ್ಲಿ ಭಯ ಇನ್ನಷ್ಟು ಹೆಚ್ಚಾಗಿತ್ತು.
ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ಗರ್ಭಿಣಿಯ ಪ್ರಕರಣ
ಆದರೆ ಮೇ 22ರಂದು ಮೂಡಿಗೆರೆ ವೈದ್ಯರ ಕೊರೊನಾ ಸೋಂಕು ಪರೀಕ್ಷೆ ವರದಿ ನೆಗೆಟಿವ್ ಬಂದಿತ್ತು. ಆರು ಬಾರಿ ಪರೀಕ್ಷೆ ನಡೆಸಿದ್ದರೂ ನೆಗೆಟಿವ್ ಎಂದೇ ಬಂದಿತ್ತು. ನಂತರ ಕ್ವಾರಂಟೈನ್ ನಲ್ಲಿದ್ದವರನ್ನೆಲ್ಲಾ ಬಿಡುಗಡೆ ಮಾಡಲಾಗಿತ್ತು. ಆದರೆ ಗರ್ಭಿಣಿಗೆ ಕೊರೊನಾ ಸೋಂಕು ಹೇಗೆ ಬಂತು ಎಂಬುದು ಜಿಲ್ಲಾಡಳಿತಕ್ಕೆ ತಲೆನೋವಾಗಿತ್ತು.
ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು; ಕ್ವಾರಂಟೈನ್ ನಲ್ಲಿದ್ದ 485 ಮಂದಿ ಬಿಡುಗಡೆ
ಗರ್ಭಿಣಿ ಮಹಿಳೆಯ ವರದಿಯೂ ನೆಗೆಟಿವ್
ಇಂದು ಕೊರೊನಾ ಸೋಂಕಿತೆ ಎನ್ನಲಾಗಿದ್ದ ತರೀಕೆರೆಯ ಗರ್ಭಿಣಿಯ ವರದಿಯೂ ನೆಗೆಟಿವ್ ಬಂದಿದೆ. ಐದು ಬಾರಿ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. 5 ಬಾರಿಯೂ ನೆಗೆಟಿವ್ ಎಂದು ವರದಿ ಬಂದಿದೆ. ಪಾಸಿಟಿವ್ ಎಂದು ಹೇಳಿ ಕಳೆದ 8 ದಿನಗಳಿಂದ ಗರ್ಭಿಣಿಗೆ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆರೋಗ್ಯ ಇಲಾಖೆ ಮಹಾ ಪ್ರಮಾದಕ್ಕೆ ಹೊಣೆ ಯಾರು? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಲ್ಯಾಬ್ ಯಂತ್ರದ ಯಡವಟ್ಟಿನಿಂದ ಈ ರೀತಿ ಆಗಿರಬಹುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.