ವಿಶ್ವನಾಥ್ಗೆ ಸಚಿವ ಸ್ಥಾನವಿಲ್ಲ: ಕಾನೂನು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ
ಚಿಕ್ಕಮಗಳೂರು, ಡಿಸೆಂಬರ್ 1: ಎಚ್.ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿರುವ ವಿಚಾರವಾಗಿ, ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿದರು.
ನಾವು ಎಚ್.ವಿಶ್ವನಾಥ್ ಅವರ ಪರ ಇದ್ದೇವೆ, ನಮ್ಮ ಜೊತೆ ಬಂದ ಯಾರ ಬೆನ್ನಿಗೂ ಚೂರಿ ಹಾಕುವುದಿಲ್ಲ. ಕೋರ್ಟ್ ಆದೇಶಕ್ಕೆ ನಾವು ಹೊಣೆಯಾಗುವುದಿಲ್ಲ. ಅವರು ಚುನಾವಣೆಯಲ್ಲಿ ಸೋತರೂ ಎಂಎಲ್ಸಿ ಆಗಿದ್ದಾರೆ ಎಂದು ಹೇಳಿದರು.
ಆಣೆ ಪ್ರಮಾಣಕ್ಕೆ 1 ವರ್ಷ; ವಿಶ್ವನಾಥ್ಗೆ ನ್ಯಾಯದೇವತೆಯಿಂದ ಶಿಕ್ಷೆಯಾಗಿದೆ: ಸಾ.ರಾ ಮಹೇಶ್
ಸೋತವರಿಗೆ ಬೇರೆ ಯಾವ ಪಕ್ಷದಲ್ಲಿಲೂ ಈ ಮಟ್ಟದ ಮನ್ನಣೆ ಸಿಗುತ್ತಿರಲಿಲ್ಲ. ಅಡ್ವೋಕೇಟ್ ಜನರಲ್ ಹಾಗೂ ನಾವು ಏನು ಮಾಡಬೇಕು ಅದನ್ನು ಮಾಡಿದ್ದೇವೆ. ಅದನ್ನು ಮೀರಿ ಕೋರ್ಟ್ ತೀರ್ಪಿಗೆ ಯಾರನ್ನೂ ದೂಷಿಸುವಂತಿಲ್ಲ ಎಂದು ತಿಳಿಸಿದರು.
ಆದರೂ ಕೂಡಾ ನಾವು ಅಪೀಲ್ ಹೋಗುತ್ತೇವೆ, ಮತ್ತೊಂದು ಪ್ರಯತ್ನ ಮಾಡುತ್ತೇವೆ. ಅವರಿಗೆ ಮೋಸ ಆಗಲು ಬಿಡುವುದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಸಿದ್ದರಾಮಯ್ಯನವರ ತಲೆಕೆಟ್ಟ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆ ಇಲ್ಲ. ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿರುವವರು ಇದ್ದಾರೆ. ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ ದೇಶ ಎಂದರು.
ಈ ದೇಶದಲ್ಲಿರುವ ಶೇ.60 ರಿಂದ 70 ರಷ್ಟು ಮಂದಿ ಮೂಲ ಹಿಂದೂಗಳೇ. ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಮತಾಂತರ ಹೊಂದಿರುವವರೇ. ಒಂದು ಸಮುದಾಯವನ್ನು ಓಲೈಸಲು ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಮಾಧುಸ್ವಾಮಿ ಕಿಡಿಕಾರಿದರು.