ಚಿಕ್ಕಮಗಳೂರು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು: ಸಿಎಂ
ಚಿಕ್ಕಮಗಳೂರು,ಮೇ.18: "ಚಿಕ್ಕಮಗಳೂರಲ್ಲಿ ಅನೇಕ ಬಾರಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ. ಈ ದಿನ ಮಳೆ ಇದ್ದರೂ ಕೂಡ ಚಿಕ್ಕಮಗಳೂರಿಗೆ ಬಂದಿದ್ದೇನೆ. ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಇಡೀ ರಾಜ್ಯಕ್ಕೆ ನಿಸರ್ಗವನ್ನು ಹಂಚುವಂತಹ ಶಕ್ತಿ ಚಿಕ್ಕಮಗಳೂರಿಗಿದೆ. ಹಾಗಾಗಿ ವಿಶೇಷವಾಗಿ ಸಮಗ್ರ ಅಭಿವೃದ್ಧಿಗೆ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮೊಯಿ ಹೇಳಿದರು.
ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು 2019ರ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ಸಿಗದ ವಿಚಾರದ ಕುರಿತು ಪ್ರತಿಕ್ರಿಯಿಸಿದರು. "ಮೂಡಿಗೆರೆ ಕ್ಷೇತ್ರದ ಸಮಸ್ಯೆಯನನ್ನು ವಿಶೇಷವಾಗಿ ಗಮನಿಸುತ್ತೇನೆ. ವರದಿ ತೆಗೆದುಕೊಂಡು ನ್ಯಾಯಸಮ್ಮತವಾಗಿ ಪರಿಹಾರ ನೀಡಲು ಸೂಚಿಸುತ್ತೇನೆ. ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿ ಸಮಸ್ಯೆಯಾಗಿತು. ಪುನರ್ ಪರಿಶೀಲನೆ ಮಾಡಿ ನೈಜ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ" ಎಂದು ಭರವಸೆ ನೀಡಿದರು.
ಬೆಂಗಳೂರು ಮಳೆ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, "ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಸ್ವಲ್ಪ ತೊಂದರೆಯಾಗಿದೆ. ಕೆಲವು ಏರಿಯಾಗಳಿಗೆ ಖುದ್ದು ನಾನೇ ಭೇಟಿಯಾಗಿದ್ದೇನೆ. ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ ಇದೆ. ಅಗತ್ಯ ಮುನ್ನೇಚ್ಚರಿಕೆಯನ್ನು ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮುಂಗಾರು ಆರಂಭಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗಿದ್ದಾರೆ. ಅಗತ್ಯ ಗೊಬ್ಬರದ ದಾಸ್ತಾನು ಬಗ್ಗೆ ಕೇಂದ್ರದ ಸಚಿವರೊಂದಿಗೆ ಜೊತೆ ಮಾತನಾಡಿದ್ದೇನೆ" ಎಂದರು.
ಮೂಡಿಗೆರೆ ಕ್ಷೇತ್ರದ ಸಮಸ್ಯೆಗೆ ಪರಿಹಾರ: "ಕಳೆದ ಬಾರಿ ಮಲೆನಾಡಿನ ಬಾಗಿಲು ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದರಿಂದ ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾಗಿದೆ. ಆದರೆ, ಬಹುತೇಕ ಅತಿವೃಷ್ಟಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದೇ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ತೋಟಗಾರಿಕೆ, ಕೃಷಿ ಬೆಳೆಗಳು ಸೇರಿದಂತೆ ಮರಗಿಡಗಳು, ರಸ್ತೆ, ಚರಂಡಿ ಕೊಚ್ಚಿ ಹೋಗಿದ್ದು, ಕಟ್ಟಡಗಳು, ಶಾಲೆಗಳು, ಧರೆ ಕುಸಿತ ಉಂಟಾಗಿದೆ. ನಷ್ಟವಾದ ಭಾಗಗಳಿಗೆ ಅನುದಾನ ಬಿಡುಗಡೆಗೊಂಡಿದ್ದರಿಂದ ಒಂದಿಷ್ಟು ರಸ್ತೆಗಳು ಮರು ಡಾಂಬರೀಕರಣಗೊಂಡಿವೆಯಾದರೂ ಸಾಕಷ್ಟು ಹಾಗೆಯೇ ಉಳಿದಿವೆ. ವರದಿ ತೆಗೆದುಕೊಂಡು ನ್ಯಾಯಸಮ್ಮತವಾಗಿ ಪರಿಹಾರ ನೀಡಲು ಸೂಚಿಸುತ್ತೇನೆ" ಎಂದು ಸಿಎಂ ಹೇಳಿದರು.