ಗಾಂಧೀಜಿ ಕೊಂದಿದ್ದು ಆರ್ ಎಸ್ ಎಸ್, ಹಿಂದೂ ಮಹಾಸಭಾ ಎಂದ ಸಿದ್ದರಾಮಯ್ಯ
ಚಿಕ್ಕಮಗಳೂರು, ಜನವರಿ 31: ಮಹಾತ್ಮ ಗಾಂಧಿಯನ್ನು ಕೊಂದಿದ್ದು ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾದವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಮಾಡಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಹಾತ್ಮಾ ಗಾಂಧೀಜಿಯವರು ಹಿಂದೂ ವಿರೋಧಿಯಾಗಿರಲಿಲ್ಲ, ಸಂವಿಧಾನ ವಿರೋಧಿಯಾಗಿರಲಿಲ್ಲ ಆದರೂ ಯಾಕೆ ಅವರನ್ನು ಕೊಂದರು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮತ್ತು ಗುಂಡೂರಾವ್ ರಾಜೀನಾಮೆ ನೀಡಲು ಇವರೇ ಕಾರಣ
ಗಾಂಧೀಜಿಯವರು ದೇಶದಲ್ಲಿ ಸೌಹಾರ್ದಕ್ಕಾಗಿ ಹೋರಾಟ ಮಾಡಿದ್ದರು, ಆದರೆ ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾದವರು ಗಾಂಧೀಜಿ ಕೊಲ್ಲುವುದಕ್ಕೆ ಆರು ಬಾರಿ ಪ್ರಯತ್ನ ಮಾಡಿದ್ದರು, ಕೊನೆಗೆ ಕೊಂದು ಹಾಕೇ ಬಿಟ್ಟರು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪ್ರತಿಭಟನೆ ಮಾಡುವುದೂ ಅಪರಾಧವಾಗಿದೆ
ಇದೇ ಸಂದರ್ಭದಲ್ಲಿ ದೆಹಲಿಯ ಪ್ರತಿಭಟನಾಕಾರ ಮೇಲೆ ಗುಂಡಿನ ಹಾರಿಸಿದ ವಿಚಾರವಾಗಿ ಮಾತನಾಡಿದ ಅವರು, ""ವಿದ್ಯಾರ್ಥಿಗಳು ರಾಜ್ ಘಾಟ್ ಗೆ ಹೋಗುತ್ತಿದ್ದ ವೇಳೆ, ಅವನ್ಯಾರೋ ವ್ಯಕ್ತಿ ಸ್ವಾತಂತ್ರ್ಯ ಬೇಕಾ ಅಂತಾ ಗುಂಡು ಹೊಡೆಯುತ್ತಾನೆ.
ಆದರೆ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು, ದೇಶದಲ್ಲಿ ಭದ್ರತೆ ಎಲ್ಲಿದೆ'' ಎಂದು ಕಿಡಿಕಾರಿದರು. ದೇಶದಲ್ಲಿ ಪ್ರತಿಭಟನೆ ಮಾಡುವುದೂ ಅಪರಾಧವಾಗಿದೆ, ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ, ಶಾ ಪ್ರಚೋದನೆ ಕೊಡುತ್ತಿದ್ದಾರೆ
ಸಿಎಎ ವಿರೋಧ ಮಾಡುವವರು ದೇಶ ವಿರೋಧಿಗಳು ಎನ್ನುವ ಕೇಂದ್ರ ಸಚಿವ ಅರುಣ್ ಠಾಕೂರ್ ಗೂ ಹಿಟ್ಲರ್ ಗೂ ವ್ಯತ್ಯಾಸ ಏನು? ಎಂದ ಸಿದ್ದರಾಮಯ್ಯ, ಇವರ ಹೇಳಿಕೆಯನ್ನು ದೇಶ ಭಕ್ತ ಹೇಳಿಕೆ ಅಂತಾ ಕರೆಯಬೇಕಾ ಅಥವಾ ದೇಶದ್ರೋಹಿ ಹೇಳಿಕೆ ಅಂತಾ ಕರೆಯಬೇಕಾ? ಎಂದು ಪ್ರಶ್ನಿಸಿದರು.
"ಈಗ ಎಲ್ಲಿ ನೋಡಿದರೂ ರಾಷ್ಟ್ರಧ್ವಜ": ಮೋದಿಗೆ ಅಭಿನಂದನೆ ಹೇಳಿದ ರಮೇಶ್ ಕುಮಾರ್
ದ್ವೇಷದ ಬೀಜವನ್ನು ಬಿತ್ತುತ್ತಿರುವವರು ದೇಶದ್ರೋಹಿಗಳು, ಸಮಾಜ ಒಡೆಯುವ ಕೆಲಸ ಮಾಡುತ್ತಿರುವವರು ದೇಶದ್ರೋಹಿಗಳು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಪ್ರಚೋದನೆಯಿಂದಲೇ ಗುಂಡು ಹಾರಿಸುವ ಮಟ್ಟಕ್ಕೆ ಬಂದಿದೆ ಎಂದು ಹೇಳಿದರು.
ಲಕ್ಷಾಂತರ ಉದ್ಯೋಗ ನಷ್ಟವಾಗಿದೆ
ಕಳೆದ ಬಾರಿ ಬಜೆಟ್ 27 ಲಕ್ಷ ಕೋಟಿ ಖರ್ಚು ಮಾಡುತ್ತೇನೆ ಎಂದಿದ್ದರು, ನಾಳೆ ಏನು ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತೆ. ಪ್ರಧಾನಿ ಮೋದಿ ಸ್ವರ್ಗ ಸ್ವರ್ಗ ಸೃಷ್ಟಿ ಮಾಡುತ್ತೇನೆ ಅಂದಿದ್ದರು, ಆದರೆ ಈಗ ನರಕವಾಗಿದೆ ಎಂದು ವ್ಯಂಗ್ಯವಾಡಿದರು.
ಜಿಡಿಪಿ ಅವರ ಪ್ರಕಾರ 4.5% ನನ್ನ ಪ್ರಕಾರ 2.5%, ೧೦ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು, ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದ್ದು, ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಇದನ್ನು ಮುಚ್ಚಿ ಹಾಕಲು ಸಿಎಎ ಎನ್ಆರ್ಸಿ ಮೂಲಕ ಬೇರೆ ಕಡೆ ಗಮನ ಸೆಳೆಯಲು ನಾಟಕವಾಡುತ್ತಿದ್ದಾರೆ ಎಂದರು.
ಸಿ.ಟಿ.ರವಿ ಬಗ್ಗೆ ನನಗಿಂತ ಕಾರ್ಯಕರ್ತರಿಗೇ ಚೆನ್ನಾಗಿ ಗೊತ್ತು
ಚಿಕ್ಕಮಗಳೂರು ಅಭಿವೃದ್ಧಿ ವಿಚಾರವಾಗಿ ಸಚಿವ ಸಿ.ಟಿ.ರವಿ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ,
""ಸಿ.ಟಿ.ರವಿಗೆ ಸತ್ಯ ಹೇಳಿ ಗೊತ್ತಿಲ್ಲ, ಪಾಪ ಸುಳ್ಳು ಹೇಳೋದನ್ನೇ ಮೈಗೂಡಿಸಿಕೊಂಡಿದ್ದಾರೆ'' ಎಂದು ತಿರುಗೇಟು ನೀಡಿದರು.
5 ವರ್ಷ ವಿರೋಧ ಪಕ್ಷದಲ್ಲಿದ್ದಾಗ ಕ್ಷೇತ್ರದ ಎಷ್ಟು ಕಡೆ ಗಮನ ಹರಿಸಿದ್ದರು ಎಂದು ಹೇಳಲಿ. ಈಗ ಮಂತ್ರಿಯಾಗಿದ್ದಾರೆ, ಹಿಂದೆಯೂ ಮಂತ್ರಿಯಾಗಿದ್ದರು. ಹಳ್ಳಿಗೆ ಹೋಗಿ ಜನರನ್ನು ಕೇಳೋಣ, ಆಮೇಲೆ ತೀರ್ಮಾನ ಮಾಡೋಣ ಎಂದರಲ್ಲದೇ, ಸ್ಥಳೀಯ ಕಾರ್ಯಕರ್ತರನ್ನು ಕೇಳಿದರೆ ಬರೀ ಅವರ ಅಭಿವೃದ್ಧಿಯಾಗಿದೆ ಅಷ್ಟೇ ಅಂತಾರೆ. ಸಿ.ಟಿ.ರವಿ ಬಗ್ಗೆ ನನಗಿಂತ ಚೆನ್ನಾಗಿ ನಿಮಗೆ ಗೊತ್ತು ಎಂದು ಹೇಳಿದರು.