ಶವ ಸಂಸ್ಕಾರಕ್ಕೂ ಸಮಸ್ಯೆ; ಹೊಳೆಕೂಡಿಗೆ ಗ್ರಾಮದವರ ಕರುಣಾಜನಕ ಬದುಕು
ಚಿಕ್ಕಮಗಳೂರು, ಆಗಸ್ಟ್ 28: ದುಃಖದ ಮೇಲೆ ದುಃಖದ ಸನ್ನಿವೇಶ ಅಂದರೆ ಇದೇ ಇರಬಹುದಾ? ನೀವೇ ಈ ವರದಿ ಓದಿದ ನಂತರ ನಿರ್ಧಾರ ಮಾಡಿ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದಲ್ಲಿ ಶವ ಸಾಗಾಟಕ್ಕೆ ಕೂಡ ಸಮಸ್ಯೆ ಆಗಿದೆ. ಜಾಂಡೀಸ್ ನಿಂದ ಬಳಲುತ್ತಿದ್ದ ರಾಘವೇಂದ್ರ (35) ಅವರನ್ನು ಚಿಕಿತ್ಸೆಗೆ ಸೇರಿಸಲಾಗಿತ್ತು.
ಆ ನಂತರ ಚಿಕಿತ್ಸೆಗೆ ಸ್ಪಂದಿಸದೆ ರಾಘವೇಂದ್ರ ಸಾವನ್ನಪ್ಪಿದರು. ಮೃತರ ಗ್ರಾಮವಾದ ಹೊಳೆಕೂಡಿಗೆಗೆ ಪಾರ್ಥಿವ ಶರೀರವನ್ನು ಹರಸಾಹಸ ಮಾಡಿ, ತರಲಾಗಿದೆ. ಒಂದು ಕಿಲೋಮೀಟರ್ ತನಕ ಹೊತ್ತುಕೊಂಡು ಬಂದು, ಆ ನಂತರ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಗ್ರಾಮಕ್ಕೆ ಶವವನ್ನು ತಂದಿದ್ದರು ಕುಟುಂಬಸ್ಥರು.
ಅಂದ ಹಾಗೆ ಈ ಗ್ರಾಮಸ್ಥರ ಸಮಸ್ಯೆ ಏನೆಂದರೆ, ಹೊಳೆಕೂಡಿಗೆ ಗ್ರಾಮಕ್ಕೆ ತೆರಳುವುದಕ್ಕೆ ರಸ್ತೆ- ಸೇತುವೆ ಇಲ್ಲದೆ ಪರದಾಡುವಂತಾಗಿದೆ. ಕಣ್ಣೀರು ಹಾಕುತ್ತಲೇ ಪಾರ್ಥಿವ ಶರೀರವನ್ನು ಸಾಗಿಸಿದ್ದಾರೆ ಕುಟುಂಬಸ್ಥರು. "ಸಮಾಜದಲ್ಲಿ ಗೌರವಯುತವಾಗಿ ಬದುಕುವುದಕ್ಕೆ ನಮಗೂ ಒಂದು ಅವಕಾಶ ನೀಡಿ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿ" ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.