ಚಿಕ್ಕಮಗಳೂರಿನಲ್ಲಿ ಐಕಾಯಿನ್ ಕಂಪನಿಯಿಂದ ವಂಚನೆ
ಚಿಕ್ಕಮಗಳೂರು, ಜೂನ್ 22: ರಾಜ್ಯದಲ್ಲಿ ಐಎಂಎ ಬಹುಕೋಟಿ ಹಗರಣದ ನಂತರ, ಮತ್ತೊಂದು ವಂಚನೆ ಪ್ರಕರಣ ಬಯಲಾಗಿದೆ. ಅಧಿಕ ಬಡ್ಡಿ ಕೊಡುವುದಾಗಿ ಹೇಳಿ, ಹಣ ತೆಗೆದುಕೊಂಡು ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ಬಾರ್ ಲೈನ್ ರಸ್ತೆಯಲ್ಲಿರುವ ಐಕಾಯಿನ್ ಹೆಸರಿನ ಚಿಕ್ಕ ಕಂಪನಿಯಿಂದ ಸಾವಿರಾರು ಜನರು ವಂಚನೆಗೆ ಒಳಗಾಗಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ, ಅಧಿಕ ಬಡ್ಡಿ ಕೊಡುವುದಾಗಿ ತಿಳಿಸಿ ಹಣ ತೆಗೆದುಕೊಂಡು ವಂಚಿಸಲಾಗಿದೆ. ಸಾವಿರಾರು ಜನರಿಂದ ಲಕ್ಷ ಲಕ್ಷ ಪಡೆದು ಟೋಪಿ ಹಾಕಲಾಗಿದೆ.
ಐಎಂಎ ವಂಚನೆ: ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ
ಆರೋಪಿಗಳು ಪರಾರಿಯಾಗುವ ಸಂದರ್ಭ ಪೊಲೀಸರ ದಿಢೀರ್ ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಜಿಲ್ಲಾದ್ಯಂತ ಹಲವರು ವಂಚನೆಗೆ ಒಳಗಾಗಿದ್ದು, ಒಬ್ಬೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದಿರುವುದಾಗಿ ತಿಳಿದುಬಂದಿದೆ. ಐಕಾಯಿನ್ ಕಚೇರಿ ಮುಂದೆ ಹಣ ಕಳೆದುಕೊಂಡವರು ಜಮಾವಣೆಯಾಗಿದ್ದರು.