ಚಿಕ್ಕಮಗಳೂರಿನಲ್ಲಿ ಮೀನಿಗೆಂದು ಬಲೆ ಬೀಸಿದರೆ ಸಿಕ್ಕಿದ್ದೇ ಬೇರೆ!
ಚಿಕ್ಕಮಗಳೂರು, ಫೆಬ್ರವರಿ 11: ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ನಾಲ್ಕು ನಾಗರ ಹಾವುಗಳು ಸಿಲುಕಿಕೊಂಡಿದ್ದು, ಎರಡು ಹಾವುಗಳು ಬಲೆಯಲ್ಲೇ ಸಾವನ್ನಪ್ಪಿದ್ದರೆ, ಮತ್ತೆರಡು ಹಾವುಗಳನ್ನು ಸ್ನೇಕ್ ನರೇಶ್ ರಕ್ಷಣೆ ಮಾಡಿದ್ದಾರೆ.
ಚಿಕ್ಕಮಗಳೂರಿನ ಮೂಗುತಿಹಳ್ಳಿ ಗ್ರಾಮದ ದಯಾನಂದ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ಮೀನು ಹಿಡಿಯಲು ಬಲೆ ಹಾಕಲಾಗಿತ್ತು. ಈ ವೇಳೆ ನಾಲ್ಕು ನಾಗರಹಾವುಗಳು ಬಲೆಯಲ್ಲಿ ಸಿಲುಕಿ ಎರಡು ದಿನಗಳ ಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿವೆ. ಇದನ್ನು ನೋಡಿದ್ದ ಸ್ಥಳೀಯರು ಸ್ನೇಕ್ ನರೇಶ್ ಗೆ ಮಾಹಿತಿ ತಿಳಿಸಿದ್ದಾರೆ.
ಜಮೀನಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ
ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ನರೇಶ್ ಸೂಕ್ಷ್ಮವಾಗಿ ಹಾವುಗಳನ್ನು ಬಲೆಯಿಂದ ಬಿಡಿಸಿದರು. ಈ ವೇಳೆಗಾಗಲೇ ಎರಡು ಹಾವುಗಳು ಸಾವನ್ನಪ್ಪಿದ್ದವು. ಬದುಕಿದ್ದ ಮತ್ತೆರಡು ಹಾವುಗಳನ್ನು ಬಲೆಯಿಂದ ಬಿಡಿಸಿ ಕಾಡಿಗೆ ಬಿಡಲಾಯಿತು. ಸಾವನ್ನಪ್ಪಿದ್ದ ಎರಡು ಹಾವುಗಳನ್ನು ಸ್ನೇಕ್ ನರೇಶ್ ಹಾಗೂ ಕೆಲ ಸ್ಥಳೀಯರು ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಿದರು.