ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿಗೆ ಬಿದ್ದ ಮಾಜಿ ಸೈನಿಕ
ಚಿಕ್ಕಮಗಳೂರು, ಮೇ 14: ಒಂದು ಹೊತ್ತಿನ ಊಟಕ್ಕೂ ಅನ್ನವಿಲ್ಲದೇ ಮಾಜಿ ಸೈನಿಕ ರಾಮಪ್ಪ ಬೀದಿಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಜಿ ಸೈನಿಕನು ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವ ದೃಶ್ಯ ಕಂಡುಬಂದಿದೆ. ಕೊರೊನಾ ವೈರಸ್ ಇರುವ ಸಂದರ್ಭದಲ್ಲಿಯೇ ತಂದೆಯನ್ನು ಮಗ ಬೀದಿಗೆ ತಳ್ಳಿದ್ದಾನೆ.
ಚಿಕ್ಕಮಗಳೂರಿನಲ್ಲಿ ಆತಂಕ ಸೃಷ್ಟಿಸಿದ ಅನಾಮಧೇಯ ಸೂಟ್ ಕೇಸ್
ಆಸ್ತಿ ಆಸೆಗಾಗಿ ಮಾಜಿ ಯೋಧ ರಾಮಪ್ಪನನ್ನು ಆತನ ಮಗನೇ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿನಿತ್ಯ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಕೊಪ್ಪ ಪಟ್ಟಣದಲ್ಲಿ ಮಾಜಿ ಯೋಧ ರಾಮಪ್ಪ ಅಲೆಯುತ್ತಿರುತ್ತಾನೆ.
ಕೆಲ ದಿನಗಳ ಹಿಂದೆಯಷ್ಟೇ ರಾಮಪ್ಪ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದನು. ಉಳಿದುಕೊಳ್ಳಲು ಸೂರಿಲ್ಲದೇ, ತಿನ್ನಲು ಅನ್ನವಿಲ್ಲದೆ ಪರದಾಡುತ್ತಿದ್ದಾನೆ. ಪಾಳುಬಿದ್ದ ಹಳೆ ಬಸ್ ನಿಲ್ದಾಣ, ಹಳೇ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾನೆ. ಸರ್ಕಾರ ಮತ್ತು ಸಾರ್ವಜನಿಕರು ಈತನ ನೆರವಿಗೆ ಧಾವಿಸಿ, ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಾಗಿದೆ.