ಅರಣ್ಯಾಧಿಕಾರಿಗಳಿಂದ ಹಗಲು ದರೋಡೆ; ಮೂಡಿಗೆರೆ ತಾ. ದುರ್ಗದಹಳ್ಳಿಯ ಜನರ ಆರೋಪ
ಚಿಕ್ಕಮಗಳೂರು, ಅಕ್ಟೋಬರ್, 02: ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಜನರು ಜಿಲ್ಲೆಯ ಅರಣ್ಯ ಅಧಿಕಾರಿಗಳು ಹಾಗೂ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣದಲ್ಲಿ ಅರಣ್ಯ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಬಲ್ಲಾಳರಾಯನದುರ್ಗದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯ ನೋಡುವ ಕಣ್ಣುಗಳಿಗೆ ಹೊಸದೊಂದು ಪ್ರಪಂಚವನ್ನೇ ಪರಿಚಯಿಸುತ್ತದೆ. ಈ ಸೌಂದರ್ಯ ರಾಶಿಯನ್ನ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಂದ ಕಳೆದ 4 ವರ್ಷಗಳಿಂದ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ತಲಾ 305 ರೂಪಾಯಿ ಸಂಗ್ರಹ ಮಾಡುತ್ತಿದೆ. ಒಂದು ಶೌಚಾಲಯದ ವ್ಯವಸ್ಥೆ ಇಲ್ಲ, ವಿಶ್ರಾಂತಿ ಗೃಹವೂ ಇಲ್ಲಂತಾಗಿದೆ. ಹಾಗಾದರೆ ಬಂದ ಹಣ ಎಲ್ಲಿ ಹೋಯಿತು ಅನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಕಳೆದ ಎರಡು ವರ್ಷದಿಂದ ಸ್ಥಳಿಯರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ಹಾಗಾಗಿ ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಂದ ಸುಲಿಗೆಗೆ ಇಳಿದಿದೆ ಎಂದು ಆರೋಪಿಸಿ ಸ್ಥಳಿಯರು ಇಲಾಖೆ ವಿರುದ್ಧ ಬೀದಿಗಳಿದು ಹೋರಾಟ ನಡೆಸಿದ್ದಾರೆ. ಯಾರು ಕೂಡ ಗುಡ್ಡಕ್ಕೆ ಹೋಗದಂತೆ ರಸ್ತೆಗೆ ಹಗ್ಗ ಕಟ್ಟಿ ಪ್ರತಿಭಟಿಸಿದ್ದಾರೆ.
ಕಾಫಿನಾಡಿನ ನೀಲಿ ಕುರುಂಜಿ ಹೂ ಇದೀಗ ಪ್ರವಾಸಿಗರ ಆಕರ್ಷಣೆ; ವಿಶೇಷತೆ ಇಲ್ಲಿದೆ ನೋಡಿ
ಸೌಲಭ್ಯವಂಚಿತ ಪ್ರವಾಸಿ ತಾಣ
ಸರ್ಕಾರ ಕಳೆದ ಮೂರು ವರ್ಷಗಳಿನಿಂದಲೂ "ಎಕೋ ಟೂರಿಸಂ" ಹೆಸರಿನಲ್ಲಿ ಪ್ರವಾಸಿಗರಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಆ ಹಣ ಸರ್ಕಾರದ ಖಜಾನೆ ಸೇರುತ್ತಿದೆಯೋ ಇಲ್ಲ, ಬೇರೆಡೆಗೆ ಹೋಗುತ್ತಿದೆಯೋ ಎನ್ನುವ ಮಾಹಿತಿ ಗೊತ್ತಿಲ್ಲದಂತಾಗಿದೆ. ಆದರೆ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವಂತೂ ಸಿಗುತ್ತಿಲ್ಲ. ಗ್ರಾಮಸ್ಥರು ಕೂಡ ಕಳೆದ ಮೂರು ವರ್ಷಗಳಿಂದಲೂ ಅರಣ್ಯ ಇಲಾಖೆ ವಿರುದ್ದ ಹೋರಾಟ ಮಾಡುತ್ತಲೇ ಬಂದಿದ್ದಾರೆ.
ಜನರ ಮನವಿಗೆ ಕ್ಯಾರೆ ಅನ್ನದ ಅರಣ್ಯ ಇಲಾಖೆ
ಗ್ರಾಮ ಪಂಚಾಯಿತಿಯಡಿ ಗ್ರಾಮ ಅರಣ್ಯ ಸಮಿತಿಯ ಮೂಲಕ ಶುಲ್ಕ ವಿಧಿಸಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾರಣ ಸ್ಥಳಿಯರೇ ಸರ್ಕಾರದ ವಿರುದ್ಧ ಬೀದಿಗಳಿದು ಅಸಮಾಧಾನ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ
ಇಲ್ಲಿಗೆ ಬರುವ ಪ್ರವಾಸಿಗರಿಂದ ದಿನಕ್ಕೆ ನೂರು ಜನರಿಗೆ ಮಾತ್ರ ಆನ್ಲೈನ್ನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಉಳಿದವರಿಗೆ ಆನ್ಲೈನ್ನಲ್ಲಿ ತೆಗೆದುಕೊಳ್ಳುವ ಅವಕಾಶ ಇರುವುದಿಲ್ಲ. ಅಂತವರನ್ನೇ ಗುರಿಯಾಗಿಸಿಕೊಂಡು ಅವರಿಂದ ಯಾವುದೇ ರಶೀದಿಯನ್ನ ಪಡೆಯದೇ ದಿನಕ್ಕೆ ಸಾವಿರಾರು ರೂಪಾಯಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ದೋಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಹಣ ಮಾಡುವ ದಂಧೆ ಮಾಡುತ್ತಿದ್ದು, ಗ್ರಾಮವನ್ನು ಹಾಳು ಮಾಡುತ್ತಿದ್ದಾರೆ. ಹಣ ನೀಡಿ ಬರುವ ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ವ್ಯವಸ್ಥೆಯನ್ನೂ ಮಾಡದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಕಾಬಿಟ್ಟಿ ಶುಲ್ಕಕ್ಕೆ ಕಡಿವಾಣ ಹಾಕಲು ಆಗ್ರಹ
ಅಧಿಕಾರಿಗಳು ತಕ್ಷಣ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಈವರೆಗೆ ಪಡೆದಿರುವ ಹಣದ ದಾಖಲೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ಮುಂದೆ ಗ್ರಾಮ ಅರಣ್ಯ ಸಮಿತಿ ರಚಿಸಿ, ಸಮಿತಿಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಪ್ರವಾಸಿಗರಿಂದ 300 ರೂಪಾಯಿ ವಸೂಲಿ ಮಾಡುವಂತಿಲ್ಲ. 50 ರೂಪಾಯಿ ಟಿಕೆಟ್ ಮಾಡಿ ಅದಕ್ಕೆ ತಕ್ಕಂತೆ ಶೌಚಾಲಯ, ವಿಶ್ರಾಂತಿ ಗೃಹದಂತಹ ಮೂಲಭೂತ ಸೌಲಭ್ಯದ ಜೊತೆ ಪ್ರವಾಸಿಗರಿಗೆ ಗೈಡ್ಗಳನ್ನು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.