ಮಂಗನ ಕಾಯಿಲೆ:ಟ್ರಕ್ಕಿಂಗ್ ಪ್ರಿಯರಿಗೆ ಮಲೆನಾಡಿನ ಪ್ರವಾಸಿ ತಾಣಗಳು ಬಂದ್!
ಚಿಕ್ಕಮಗಳೂರು, ಫೆಬ್ರವರಿ 05: ಈಗಾಗಲೇ ಮಂಗನ ಕಾಯಿಲೆ ಮಲೆನಾಡು ಜನರನ್ನು ತತ್ತರಗೊಳಿಸಿದ್ದು, ಇದೀಗ ಕೆಎಫ್ ಡಿ ವೈರಾಣಿಗೆ ಭಯಗ್ರಸ್ಥಗೊಂಡ ಅರಣ್ಯ ಇಲಾಖೆ ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್ ಗೆ ನಿರ್ಬಂಧ ಹೇರಿದೆ. ಇದು ಮಲೆನಾಡಿಗೆ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.
ಹೌದು, ಮಲೆನಾಡಿನಲ್ಲಿ ಮಂಗನ ಕಾಯಿಲೆ ದಿನೇ ದಿನೆ ಉಲ್ಬಣಗೊಳ್ಳುತ್ತಿದೆ. ಇಲ್ಲಿನ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಮಂಗಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೂ ಕೆಎಫ್ ಡಿ ವೈರಾಣು ಹರಡುವ ಸಾಧ್ಯತೆ ಇದೆ.
ಮಂಗನ ಕಾಯಿಲೆ ಹಿನ್ನೆಲೆ ಬನವಾಸಿ ಕದಂಬೋತ್ಸವ ಮುಂದೂಡಿಕೆ
ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈಗಾಗಲೇ ಚಿಕ್ಕಮಗಳೂರು, ಕಾರ್ಕಳ ವಿಭಾಗಕ್ಕೆ ಒಳಪಡುವ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್ , ಕುರೆಂಜಲ್ ಗಿರಿಶ್ರೇಣಿ, ಕೊಡಚಾದ್ರಿ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ನಿಷೇಧಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಲ್ಲಿ ವಿಹಿತವಾದ ಅಧಿಕಾರದಂತೆ ಈ ಆದೇಶ ಹೊರಡಿಸಿದೆ
ಜನವರಿ 21 ರಿಂದ ಜುಲೈ ಆರಂಭಗೊಳ್ಳುವ ಮಳೆಗಾಲದವರೆಗೆ ಈ ಆದೇಶವನ್ನು ಹೊರಡಿಸಲಾಗಿದೆ. ಟ್ರಕ್ಕಿಂಗ್ ಮಾಡುವುದರಿಂದ ಅರಣ್ಯಭಾಗದಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸುವು ಸಲುವಾಗಿಯೂ ಈ ಆದೇಶವನ್ನು ಪಾಲಿಸಲಾಗುತ್ತಿದೆ. ಹೀಗಾಗಿ ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಟ್ರಕ್ಕಿಂಗ್ ಪ್ರಿಯರಿಗೆ ಮಲೆನಾಡಿನ ಪ್ರವಾಸಿತಾಣಗಳು ಬಂದ್ ಆಗಿದೆ.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರದಿಂದ ಟಾಸ್ಕ್ಫೋರ್ಸ್
ಇದು ಪ್ರವಾಸಿಗರಲ್ಲಿ ಕೊಂಚ ನಿರಾಸೆ ಮೂಡಿಸಿದೆ. ಇದರಿಂದ ಪ್ರವಾಸಿಗರನ್ನು ನಂಬಿಕೊಂಡ ಅನೇಕ ಉದ್ದಿಮೆಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಒಟ್ಟಾರೆ ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆ ಈಗ ಪ್ರವಾಸಿಗರಿಗೂ ತಲೆನೋವಾಗಿ ಪರಿಣಮಿಸಿದೆ. ಇದು ಸಾಕಷ್ಟು ಪ್ರವಾಸಿಗರಿಗೆ ನಿರಾಸೆ ಮೂಡಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ತಗೆದುಕೊಳ್ಳುತ್ತಾ ಕಾದು ನೋಡಬೇಕಿದೆ.